ದ.ರಾ. ಬೇಂದ್ರಯವರಿಂದಲೇ ಯುಗದ ಕವಿ, ಜಗದ ಕವಿ
ಎಂದು ಕರೆಸಿಕೊಂಡ ಕುವೆಂಪು
ಕನ್ನಡ ಮಣ್ಣಿನ ಸಹಿಷ್ಣುತೆ, ಭವ್ಯ ಪರಂಪರೆಗೆ ಕಪ್ಪು
ಚುಕ್ಕೆ ರೋಹಿತ್ ಚಕ್ರತೀರ್ಥ
ಯುಗದ ಕವಿ ಜಗದ ಕವಿ ಎಂದು ದ.ರಾ. ಬೇಂದ್ರೆ ಅವರಂತಹ ಮೇರು ಕವಿಯಿಂದಲೇ ಹೊಗಳಿಕೆಗೆ ಪಾತ್ರವಾಗಿ, ಮನುಕುಲದ ಒಳಿತಿಗಾಗಿ ವಿಶ್ವ ಮಾನವ ಸಂದೇಶ ಸಾರಿದ ಈ ದೇಶದ, ರಾಜ್ಯದ ವಿಶೇಷವಾಗಿ ತೀರ್ಥಹಳ್ಳಿ ಮಣ್ಣಿನ ಮೇರು ಕವಿ ಕುವೆಂಪು ಅವರನ್ನು ಹೀನಾಯವಾಗಿ ನಿಂದಿಸುವ, ನಾಡ ಧ್ವಜವನ್ನು ಒಳ ಉಡುಪಿಗೆ ಹೋಲಿಸುವ ವಿಕೃತ ಮನಸ್ಥಿತಿ ಉಳ್ಳ ಪಠ್ಯ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥನನ್ನು ಸರ್ಕಾರ ಕೂಡಲೇ ಬಂಧಿಸಿ ಶಿಕ್ಷಿಸಬೇಕೆಂದು ಎಂದು ಕರ್ನಾಟಕ ಕಾಂಗ್ರೆಸ್ ಸಹಕಾರ ವಿಭಾಗದ ರಾಜ್ಯ ಸಹಸಂಚಾಲಕರಾದ ಡಾ.ಆರ್. ಎಂ. ಮಂಜುನಾಥ ಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಕನ್ನಡ ನಾಡು ಶರಣರು, ಸೂಫಿಗಳು, ವಚನಕಾರರು, ಭಕ್ತಿಪಂಥದ ದಾಸರು, ಆಧುನಿಕ ಸಾಹಿತ್ಯದಲ್ಲಿ ಪ್ರಖರ ವೈಚಾರಿಕ ವಾದಿಗಳನ್ನು ಸಹನೆಯಿಂದ ಆಲಿಸಿ ಭಿನ್ನಾಭಿಪ್ರಾಯಗಳನ್ನು ಅತ್ಯಂತ ಗೌರವಗಳಿಂದ ದಾಖಲಿಸಿದ ಪರಂಪರೆ ಹೊಂದಿದೆ. ಇಂತಹ ನಾಡಿನಲ್ಲಿ ರೋಹಿತ್ ಚಕ್ರತೀರ್ಥನಂತಹ ವ್ಯಕ್ತಿ ಹುಚ್ಚು ಹುಚ್ಚಾಗಿ ತಮ್ಮ ಜವಾಬ್ದಾರಿ ಮರೆತು ನಾಡಿನ ಕ್ಷೋಭೆಗೆ ಕಾರಣನಾಗುತ್ತಿರುವುದು ಖಂಡನೀಯ. ಕುವೆಂಪು, ತೇಜಸ್ವಿ, ಬರಗೂರು ರಾಮಚಂದ್ರಪ್ಪ, ನಾಗೇಶ್ ಹೆಗಡೆ ಹೀಗೆ ಜೀವಪರವಾಗಿ ಯೋಚಿಸುವ ಎಲ್ಲರ ಮೇಲೂ ಈತ ಹೀನಾಯವಾಗಿ ಬರೆದಿರುವ ಉದಾಹರಣೆಗಳಿವೆ. ಇಂತಹ ವ್ಯಕ್ತಿಯನ್ನು ಭವಿಷ್ಯದ ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿ ಇರುವ ಪಠ್ಯ ಪುಸ್ತಕ ಸಮಿತಿಗೆ ಆರಿಸಿರುವುದೇ ಸರ್ಕಾರದ ತಪ್ಪು ನಿರ್ಧಾರ ಎಂದಿದ್ದಾರೆ.
ಶ್ರೀ ನಿರ್ಮಲಾನಂದ ಸ್ವಾಮೀಜಿ, ಬಸವ ಮೃತ್ಯುಂಜಯ ಸ್ವಾಮೀಜಿ, ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ನಾಡೋಜ ಹಂಪ ನಾಗರಾಜಯ್ಯ ಸೇರಿದಂತೆ ನಾಡಿನ ಹಿತ ಬಯಸುವವರು ಎಲ್ಲರೂ ಈತನ ನೇತೃತ್ವದ ಪ್ರಮಾದವನ್ನು ಕಟುವಾಗಿ ಖಂಡಿಸಿದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ಚಕ್ರತೀರ್ಥನನ್ನು ಬಂಧಿಸುವಂತೆ ಮಂಜುನಾಥ ಗೌಡ ಆಗ್ರಹಿಸಿದ್ದಾರೆ.