ಇತಿಹಾಸ ತಿರುಚುವುದು ಘೋರ ಅಪರಾಧ
ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು
ಕುವೆಂಪು ಮತ್ತು ನಾಡಗೀತೆಯನ್ನು ಅವಮಾನಿಸಿದ ರೋಹಿತ್ ಚಕ್ರತೀರ್ಥ ವಿರುದ್ದ ಕ್ರಮ ಕೈಗೊಳ್ಳಲು ತೀರ್ಥಹಳ್ಳಿ ತಾಲ್ಲೂಕು ಕಸಾಪ ಆಗ್ರಹಿಸಿದೆ.
ಸಾಮಾಜಿಕ ಜಾಲ ತಾಣಗಳಲ್ಲಿ ರಾಷ್ಟ್ರಕವಿ ಹಾಗೂ ಕನ್ನಡ ಸಾಹಿತ್ಯಕ್ಕೆ ಚೊಚ್ಚಲ ಜ್ಞಾನಪೀಠ ಪ್ರಶಸ್ತಿಯನ್ನು ತಮ್ಮ ರಾಮಾಯಣ ದರ್ಶನಂ ಮತ್ತು ಒಟ್ಟಾರೆ ಸಾಹಿತ್ಯ ಕೃತಿಗಳ ಮೂಲಕ ತಂದು ಕೊಟ್ಟ ಮೇರು ಸಾಹಿತಿ ಕುವೆಂಪು ಅವರನ್ನು ಮತ್ತು ಅವರು ರಚಿಸಿದ ಭಾವ್ಯೆಕ್ಯವನ್ನು ಸಾರುವ ನಾಡಗೀತೆಗೆ ಅವಮಾನ ಮಾಡಿದ ರಾಜ್ಯ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರನ್ನು ರಾಜ್ಯ ಸರ್ಕಾರ ತಕ್ಷಣ ಕೆಳಗಿಳಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹಿಸಿದೆ.
ವಿದ್ಯಾರ್ಥಿಗಳು ಈ ದೇಶದ ಮುಂದಿನ ಪ್ರಜೆಗಳಾಗಿದ್ದು, ಎಳವೆಯಲ್ಲಿಯೇ ತಿರುಚಲ್ಪಟ್ಟ ಇತಿಹಾಸದ ಪಾಠವನ್ನು ಬೋಧಿಸಿ ಅವರ ಮುಗ್ದ ಮನಸ್ಸುಗಳಲ್ಲಿ ವಿಷ ಬಿತ್ತುವ ರೀತಿಯಲ್ಲಿ ಪೂರ್ವಗ್ರಹ ಪೀಡಿತರಾಗಿ ಪಠ್ಯಗಳನ್ನು ಪರಿಷ್ಕರಿಸಿದ ರೋಹಿತ್ ಚಕ್ರತೀರ್ಥ ಅವರನ್ನು ಸರ್ಕಾರವು ಆ ಸ್ಥಾನದಿಂದ ಕೆಳಗಿಳಿಸಿ ಮುಂದಾಗುವ ಘೋರ ಬೌದ್ದಿಕ ಅನಾಹುತಗಳನ್ನು ತಪ್ಪಿಸುವಂತೆ ತಾಲೂಕು ಕಸಾಪ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದೆ.
ಕರ್ನಾಟಕ ಒಂದು ಸರ್ವ ಜನಾಂಗಗಳ ಶಾಂತಿಯ ತೋಟ ಎಂಬ ಆಶಯ ಮತ್ತು ಕನ್ನಡ ನಾಡಿನ ನೆಲ, ಜಲ, ಸಂಸ್ಕೃತಿಯನ್ನು ಬಿಂಬಿಸುವ ಕುವೆಂಪು ರಚಿಸಿರುವ ಸುಂದರವಾದ ನಾಡಗೀತೆಯನ್ನು ತಿರುಚಿ ಹೀಯಾಳಿಸುವ ಮತ್ತು ಕುವೆಂಪು ಅವರಂತಹ ಮೇರು ಸಾಹಿತಿಯನ್ನು ಅವಮಾನಿಸಿದ ರೋಹಿತ್ ಚಕ್ರವರ್ತಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಮತ್ತು ಸರ್ಕಾರ ಈ ತಕ್ಷಣ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ , ಕಾರ್ಯದರ್ಶಿ ಗಾಯತ್ರಿ ಶೇಷಗಿರಿ, ಸೌಳಿ ನಾಗರಾಜ್ , ಕೋಶಾಧ್ಯಕ್ಷ ಹಾಲಿಗೆ ನಾಗರಾಜ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.