ಶಿವಮೊಗ್ಗ ಜಿಲ್ಲಾ ಪತ್ರಿಕೋದ್ಯಮ ವೈಚಾರಿಕ ನೆಲೆಗಟ್ಟಿನಲ್ಲಿದೆ - ಟೆಲೆಕ್ಸ್ ರವಿಕುಮಾರ್
ಪತ್ರಿಕೋದ್ಯಮ ಒಂದು
ವೃತ್ತಿಯಾಗಿರದೇ, ಅದೊಂದು ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ಪತ್ರಕರ್ತ ಟೆಲೆಕ್ಸ್ ರವಿಕುಮಾರ್
ಅಭಿಪ್ರಾಯಪಟ್ಟರು.
ಕೋಣಂದೂರಿನ ಗ್ರೀನ್
ಹಾರ್ಟ್ ಕೆಫೆಯಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ತೀರ್ಥಹಳ್ಳಿ ತಾಲ್ಲೂಕು ಘಟಕದ
ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಸಮಾರಂಭವನ್ನು ಎಚ್.ಎಸ್.ಅರ್ಚನ ಪ್ರಜಾವಾಣಿ
ದಿನ ಪತ್ರಿಕೆಯನ್ನು ಓದುವ ಮೂಲಕ ಉದ್ಘಾಟಿಸಲಾಯಿತು.
ಯಾವ ಭಾಗದಲ್ಲಿ ಕ್ರಿಯಾಶೀಲ
ಪತ್ರಕರ್ತನಿರುತಾನೋ ಆ ಭಾಗದ ಸಮಸ್ಯೆಗಳು ಆದಷ್ಟು ಬೇಗ ಇತ್ಯರ್ಥವಾಗುತ್ತವೆ. ಸರ್ಕಾರದ, ವ್ಯವಸ್ಥೆಯ
ಕಣ್ಣು ತೆರೆಸುವ ಕಾರ್ಯ ಪತ್ರಕರ್ತರಿಂದ ಆಗುತ್ತಿದೆ. ಆದರೆ ಸರ್ಕಾರಕ್ಕೆ ಮಾತ್ರ ಪತ್ರಕರ್ತರ ಮೇಲೆ
ಯಾವುದೇ ತರಹದ ಅಂತಃಕರಣ ಇದ್ದಂತೆ ಕಾಣುತ್ತಿಲ್ಲ. ಪತ್ರಕರ್ತರ ಬದುಕಿಗೆ ಭದ್ರತೆ ಇಲ್ಲ. ಪತ್ರಕರ್ತರದು
ದಯಾನೀಯ ಸ್ಥಿತಿ. ಅದಕ್ಕಾಗಿ ಆಪತ್ವಾಂಧವ ಎಂಬ ಗುಂಪನ್ನು ರಚಿಸಿ, ಅದರ ಮೂಲಕ ಆದ್ಯತೆಯ ಮೇರೆಗೆ ಪತ್ರಕರ್ತರ
ವೈದ್ಯಕೀಯ ಚಿಕಿತ್ಸೆಗೆ 40 ಲಕ್ಷ ರೂ.ಗಳ ನೆರವು ನೀಡಿದ್ದೇವೆ.
ಕೋವಿಡ್ ಕಾಲದಲ್ಲಿ ಕರ್ತವ್ಯ ನಿರತ 56 ಪತ್ರಕರ್ತರು ಮರಣ ಹೊಂದಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿಶೇಷ ಆಸಕ್ತಿಯಿಂದ ಕುಟುಂಬಕ್ಕೆ ತಲಾ 5ಲಕ್ಷ ರೂ. ಗಳ ನೆರವು ನೀಡಿರುವುದನ್ನು ಸ್ಮರಿಸಬಹುದು. ಆದ್ದರಿಂದ ಪತ್ರಕರ್ತರ ನೆರವಿಗೆ ಸಂಘ ಸಂಸ್ಥೆಗಳು ಸಹ ಸಹಕಾರ ನೀಡಬೇಕು ಎಂದರಲ್ಲದೆ, ಜಿಲ್ಲೆಯ ಪತ್ರಿಕೋದ್ಯಮ ಒಂದು ವೈಚಾರಿಕ ನೆಲೆಗಟ್ಟಿನ ಮೇಲೆ ನಿಂತಿದೆ. ಪ್ರಬುದ್ದ ಪತ್ರಕರ್ತರನ್ನು ಕಂಡ ನೆಲವಿದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿವಮೊಗ್ಗ ಜಿಲ್ಲಾ
ಉಪಾಧ್ಯಕ್ಷ ಶಿಕಾರಿಪುರ ಹುಚ್ಚರಾಯಪ್ಪ, ಜೇನು ಕೃಷಿಕ ಕುಕ್ಕನಕೊಡಿಗೆ ಅವಿನಾಶ್, ರೋಟರಿ ಕ್ಲಬ್
ಅಧ್ಯಕ್ಷ ಕೆ.ಆರ್. ಸದಾಶಿವ ಅವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಕಾರ್ಯನಿರತ
ಪತ್ರಕರ್ತರ ಸಂಘದ ಅಧ್ಯಕ್ಷ ಮುನ್ನೂರು ಮೋಹನ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಕೋಣಂದೂರು ಮುರುಘರಾಜ್, ಉಪಾಧ್ಯಕ್ಷ ಸಂತೋಷ್ ಕುಮಾರ್, ಜಿಲ್ಲಾಧ್ಯಕ್ಷ ವೈದ್ಯನಾಥ್,
ಉಪಾಧ್ಯಕ್ಷ ಹುಚ್ಚರಾಯಪ್ಪ, ಜಿಲ್ಲಾ ಪದಾಧಿಕಾರಿ ರಂಜಿತ್, ಜಿಲ್ಲಾ ಪ್ರತಿನಿಧಿ ಟಿ.ಕೆ.ರಮೇಶ್ ಶೆಟ್ಟಿ,
ಪತ್ರಕರ್ತ ಮನುಕುಮಾರ್ ಹಾಗೂ ತಾಲ್ಲೂಕು ಸಂಘದ ಎಲ್ಲಾ ಸದಸ್ಯರು ಇದ್ದರು.

