ತೀರ್ಥಹಳ್ಳಿಯಲ್ಲಿ ರಾಹುಲ್ ಗಾಂಧಿ ಜನ್ಮದಿನ
ಸದೃಢ ಭಾರತ ಕಟ್ಟುವ
ನಿಟ್ಟಿನಲ್ಲಿ ಮಹಾತ್ಮ ಗಾಂಧಿ ಹಾಕಿಕೊಟ್ಟ ಹಾದಿಯಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆಯುತ್ತಿದೆ. ಸುಳ್ಳುಗಳನ್ನೇ
ಸತ್ಯ ಮಾಡುವ ಮನಸ್ಥಿತಿಯವರಿಗೆ ಸ್ವಾತಂತ್ರೋತ್ತರ ಭಾರತದ ಕಲ್ಪನೆಗಳು ಇಲ್ಲ. ರಾಹುಲ್ ಗಾಂಧಿ ಹಿರಿಯರ
ಮಾರ್ಗದರ್ಶನವನ್ನು ಪಾಲಿಸಲು ಸಿಕ್ಕ ದೊಡ್ಡ ಬಳುವಳಿ ಎಂದು ಗುರುವಾರ ರಾಹುಲ್ ಗಾಂಧಿ ಜನ್ಮದಿನಾಚರಣೆ
ಅಂಗವಾಗಿ ಯುವ ಕಾಂಗ್ರೆಸ್ ವತಿಯಿಂದ ಮೇಲಿನಕುರುವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ
ನೋಟ್ ಬುಕ್ ವಿತರಣೆ ಹಾಗೂ ಜೆ.ಸಿ.ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ವಿತರಿಸಿ ಬ್ಲಾಕ್ ಕಾಂಗ್ರೆಸ್
ಅಧ್ಯಕ್ಷ ಕೆಸ್ತೂರು ಮಂಜುನಾಥ ಹೇಳಿದರು.
ರಾಹುಲ್ ಗಾಂಧಿಯ
ಕುರಿತು ಬಾಲಿಶ ಮಾತುಗಳಿಂದ ಮೂದಲಿಸುವ ವ್ಯಕ್ತಿಗಳಿಗೆ ಆತನೆಂತ ಶಕ್ತಿ ಎಂಬುದರ ಬಗ್ಗೆ ಅರಿವಿಲ್ಲ.
ಭಾರತ್ ಜೋಡೋ ಮೂಲಕ ದೇಶವನ್ನು ಮತ್ತೊಮ್ಮೆ ಕಟ್ಟಿದ್ದಾರೆ. ಭಾರತವನ್ನು ಮುನ್ನಡೆಸುವ ಸಮರ್ಥ ನಾಯಕತ್ವ
ಅವರಲ್ಲಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ಸ್ಥಾನ ಲಭಿಸುತ್ತಿದ್ದಂತೆ ಹಂಗಿಸುವವರ ಬಾಯಿಗಳು ಬಂದ್
ಆಗುತ್ತಿವೆ ಎಂದರು.
“ನೋಟ್ ಬುಕ್ ವಿತರಣೆ
ಬಹಳ ದೊಡ್ಡ ಕೆಲಸವೇನಲ್ಲ. ಕೇವಲ ಸರ್ಕಾರಿ ಶಾಲೆಯ ಮಕ್ಕಳ ಪೋಷಕರ ಹೊರೆ ತಗ್ಗಿಸುವ ಪ್ರಯತ್ನ ಅಷ್ಟೆ.
ನೂರಾರು ಕೈಗಳು ಸೇರಿಕೊಂಡರೆ ಓರ್ವ ವಿದ್ಯಾರ್ಥಿಯ ಸಂಪೂರ್ಣ ವೆಚ್ಚವನ್ನು ಭರಿಸಬಹುದು” ಎಂದು ತಾಲ್ಲೂಕು
ಯುವ ಕಾಂಗ್ರೆಸ್ ಅಧ್ಯಕ್ಷ ಪೂರ್ಣೇಶ್ ಕೆಳಕೆರೆ ಹೇಳಿದರು.
ವೇದಿಕೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಚೀಂದ್ರ ಹೆಗ್ಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಯು.ಡಿ.ವೆಂಕಟೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ಶೇಟ್, ಮುಖಂಡರಾದ ರವಿ ಹೊಸ್ಕೆರೆ, ಶ್ರೇಯಸ್ ರಾವ್, ಆದರ್ಶ ಹುಂಚದಕಟ್ಟೆ, ಬಿ.ಗಣಪತಿ, ರತ್ನಾಕರ ಶೆಟ್ಟಿ, ವಿಶ್ವನಾಥ ಶೆಟ್ಟಿ, ಹಾರೋಗೊಳಿಗೆ ವಿಶ್ವನಾಥ ಇದ್ದರು.


