12 ಲಕ್ಷ ಸ್ಕಾಲರ್‌ ಶಿಪ್‌ ವಿತರಣೆ

‌ಹಾಜಿ ಶೇಖ್‌ ಅಹಮ್ಮದ್‌ ಫೌಂಡೇಶನ್ ಚಾರಿಟಬಲ್‌ ಟ್ರಸ್ಟ್
367 ಸಾಧಕ ವಿದ್ಯಾರ್ಥಿಗಳಿಗೆ ಗೌರವ

ವಿದ್ಯಾರ್ಥಿಗಳು ಬಾಲ್ಯದಿಂದಲೇ ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ವೃತ್ತಿಪರ ಕೌಶಲ್ಯ ಬೆಳೆಸಿಕೊಂಡರೆ ಭವಿಷ್ಯ ಉಜ್ವಲವಾಗಲಿದೆ ಎಂದು ಕೆನರಾ ಬ್ಯಾಂಕ್‌ ಮಣಿಪಾಲ ಡಿಜಿಎಂ ದೇವರಾಜ್‌ ಭಾನುವಾರ ವಿದ್ಯಾಧಿರಾಜ ಸಭಾಭವನದಲ್ಲಿ ಹಾಜಿ ಶೇಖ್‌ ಅಹಮ್ಮದ್‌ ಫೌಂಡೇಶನ್‌ ಚಾರಿಟೇಬಲ್‌ ಟ್ರಸ್ಟ್‌, ನ್ಯಾಷನಲ್‌ ಸಮೂಹ ಸಂಸ್ಥೆ ವತಿಯಿಂದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದೂರದೃಷ್ಟಿಯ ಯೋಚನೆಗಳಿಗೆ ಇಂದಿನಿಂದಲೇ ಜ್ಞಾನದ ಅಡಿಪಾಯ ಹಾಕಿಕೊಳ್ಳಿ. ವಿದ್ಯಾರ್ಥಿ ವೇತನ ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಿ. ಪಿಯುಸಿ ನಂತರದ ಶಿಕ್ಷಣ ಪಡೆಯಲು ಕೆನರಾ ಬ್ಯಾಂಕ್‌ ಶೈಕ್ಷಣಿಕ ಸಾಲ ಸೌಲಭ್ಯ ಒದಗಿಸುತ್ತಿದೆ. ಆಸಕ್ತರು ಬ್ಯಾಂಕ್‌ ಸಂಪರ್ಕಿಸಬಹುದು ಎಂದು ಸಲಹೆ ನೀಡಿದರು.

ಟ್ರಸ್ಟಿ ಅಬ್ದುಲ್‌ ರೆಹಮಾನ್‌ ಮಾತನಾಡಿ “ಬಾಲ್ಯದಲ್ಲಿ ತಂದೆ ಹಾಕಿಕೊಟ್ಟ ದಾರಿಯಲ್ಲಿ ಸಂಸ್ಥೆ ಮುಂದುವರೆಯುತ್ತಿದೆ. ಜೀವನದಲ್ಲಿ ಪ್ರತಿಭೆ ಮುಖ್ಯ. ಸಾಹಿತ್ಯ, ಕೃಷಿ, ಸಾಂಸ್ಕೃತಿಕ ಚಿಂತನೆಗಳ ಜೊತೆಗೆ ಓದು ಮಾನಸಿಕ ಮತ್ತು ದೈಹಿಕ ಚಿಂತನೆ ಬೆಳೆಸುತ್ತದೆ. ಆರೋಗ್ಯ ಎಲ್ಲಾ ನೆಮ್ಮದಿಗಳಿಗಿಂತ ದೊಡ್ಡ ಸಂಪಾದನೆ” ಎಂದು ಅಭಿಪ್ರಾಯಪಟ್ಟರು.

ಟ್ರಸ್ಟಿ ಯೂಸೂಫ್‌ ಹೈದರ್‌ ಮಾತನಾಡಿ “ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಲ್ಲಿ ಸಂಸ್ಥೆ 12 ಲಕ್ಷ ವಿದ್ಯಾರ್ಥಿ ವೇತನ ನೀಡುತ್ತಿದೆ. ಮಕ್ಕಳ ಬಗ್ಗೆ ಪೋಷಕರು ಎಚ್ಚರಿಕೆಯ ನಡೆಯನ್ನು ಅನುಸರಿಸಬೇಕು. ತಂಬಾಕು, ಮದ್ಯ, ಗುಟ್ಕಾ, ಸಾಮಾಜಿಕ ಜಾಲತಾಣದ ಬಳಕೆಯ ಚಟಗಳಿಂದ ದೂರ ಇರಬೇಕು” ಎಂದು ಹೇಳಿದರು.

ಕೆನರಾ ಬ್ಯಾಂಕ್‌ ಪ್ರಬಂಧಕ ಸೌರವ್‌ ಕುಮಾರ್‌, ಶಿಕ್ಷಕ ಎನ್.ಜಿ.ಸ್ವಾಮಿ. ಟ್ರಸ್ಟಿಗಳಾದ ಇಬ್ರಾಹಿಂ ಷರೀಫ್, ಅಬ್ದುಲ್‌ ಕಲಾಂ ಆಜಾದ್‌, ಕಬೀರ್‌, ಮಂಜುನಾಥ ಮಲ್ಯ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post