ನಾಟಿ ವೈದ್ಯ ಪರಂಪರೆಯ ಅತ್ಯಂತ ಪ್ರತಿಭಾವಂತ ಹಾಗೂ ಜ್ಞಾನದ ಭಂಡಾರದಂತಿದ್ದ ಮಂಗಳ ಶಿವಣ್ಣ (78) ಗುರುವಾರ ಮುಂಜಾನೆ ನಿಧನ ಹೊಂದುವುದರೊಂದಿಗೆ ಆ ಪರಂಪರೆಯ ಹಿರಿಯ ಹಾಗೂ ಅತ್ಯಂತ ಪ್ರಸಿದ್ಧ ವ್ಯಕ್ತಿತ್ವವೊಂದು ಕಣ್ಮರೆಯಾದಂತಾಗಿದೆ.
ಕೋಣಂದೂರು ಸಮೀಪದ
ಮಂಗಳ ಎಂಬ ಕುಗ್ರಾಮದಲ್ಲಿ ಅನುಭವ, ಶ್ರದ್ಧೆ, ಕುತೂಹಲದಿಂದಲೇ ಪಾರಂಪರಿಕ ವೈದ್ಯ ಪದ್ದತಿಯಲ್ಲಿ ಅಪೂರ್ವ
ಸಾಧನೆಯನ್ನು ಕರಗತ ಮಾಡಿಕೊಂಡಿದ್ದ ಶಿವಣ್ಣನವರ ಬಳಿ ರಾಜ್ಯದಾದ್ಯಂತ ಲಕ್ಷಾಂತರ ಮಂದಿ ಮುಖ್ಯವಾಗಿ
ಮೂಳೆ ಸಂಬಂಧಿ ಕಾಯಿಲೆಗಳಿಂದ ಪವಾಡ ಸದೃಶದಂತೆ ಗುಣಮುಖರಾಗಿದ್ದಾರಲ್ಲದೇ ಅಂತವರ ಪಾಲಿಗೆ ಶಿವಣ್ಣ ಸದಾಕಾಲ
ಸ್ಮರಣೀಯರಾಗಿದ್ದರು.
ಶಿವಣ್ಣನವರು ನೀಡುತ್ತಿದ್ದ
ತೈಲ ಮತ್ತು ಗಿಡಮೂಲಿಕೆಯ ಗುಳಿಗೆ ಎಷ್ಟೊಂದು ವಿಶ್ವಾಸಾರ್ಹವಾಗಿತ್ತೆಂದರೆ ತೀರಾ ಗಂಭೀರವಾಗಿ ಅಪಘಾತ
ಇನ್ನಿತರ ಸಂದರ್ಭದಲ್ಲಿ ಮೂಳೆ ಮುರಿತಕ್ಕೆ ಒಳಗಾದವರು ತಕ್ಷಣಕ್ಕೆ ಆಧುನಿಕ ಚಿಕಿತ್ಸೆಗಳನ್ನು ಪಡೆದುಕೊಂಡರು
ಅದರ ಶಾಶ್ವತ ನಿವಾರಣೆಗಾಗಿ ಶಿವಣ್ಣನವರ ಬಳಿ ಬಂದು ನಾಟಿ ಚಿಕಿತ್ಸೆ ಪಡೆಯುತ್ತಿದ್ದುದು ಸರ್ವೆ ಸಾಮಾನ್ಯವಾಗಿತ್ತು.
ಅವರಿಗೆ ರಾಜ್ಯ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿ ಗೌರವಗಳು ಹುಡುಕಿ ಬಂದಿದ್ದವು. ಇತ್ತೀಚಿನ ವರ್ಷಗಳಲ್ಲಿ ವಯಸ್ಸಿನ ಕಾರಣ ನಿರಂತರವಾಗಿ ಚಿಕಿತ್ಸೆ ನೀಡುವುದನ್ನು ಹಂತ ಹಂತವಾಗಿ ಕಡಿಮೆ ಮಾಡಿದ್ದ ಅವರು ಉಸ್ತುವಾರಿಯನ್ನು ತಮ್ಮ ಪುತ್ರನಿಗೆ ವಹಿಸಿದ್ದರು. ಅವರ ನಿಧನಕ್ಕೆ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

