ಅವಸರವಿಲ್ಲ ಆಡಂಬರವೂ ಇಲ್ಲ….
ಇಲ್ಲಿ ಅವಸರವೂ ಸಾವಧಾನದ
ಬೆನ್ನೇರಿದೆ… ಇದು ಕುವೆಂಪುರವರ ಜಗತ್ಪಸಿದ್ಧ “ಮಲೆಗಳಲ್ಲಿ ಮದುಮಗಳು” ಕಾದಂಬರಿಯ ಒಂದು ಅರ್ಥಪೂರ್ಣ
ಸಾಲು.
ಕಳೆದ ಶುಕ್ರವಾರ
ಕುಪ್ಪಳಿಯ ಹೇಮಾಂಗಣದಲ್ಲಿ ಈ ಸಾಲಿಗೆ ಪೂರಕವಾದ ವಾತಾವರಣ ಇತ್ತು. ಪತ್ರಕರ್ತ ಕೋಣಂದೂರು ಮುರುಘರಾಜ್
ಮತ್ತು ನಾಗರತ್ನ ದಂಪತಿಗಳ ಮಗಳು ಸಿಂಚನ ಹಾಗೂ ಬೆಂಗಳೂರಿನ ವಿ.ಬೋರೆಗೌಡ ಮತ್ತು ಸರೋಜ ದಂಪತಿಗಳ ಮಗ
ದರ್ಶನ ಅವರು ಮಂತ್ರ ಮಾಂಗಲ್ಯದ ಮೂಲಕ ಭವಿಷ್ಯದ ಬಾಳನ್ನು ಹಂಚಿಕೊಳ್ಳುವ ಜೊತೆಗಾರರಾದರು.
ಸಾಂಪ್ರದಾಯಿಕ ಮದುವೆಗಳಲ್ಲಿ
ಕಂಡು ಬರುವ ಗಡಿಬಿಡಿ ಅರ್ಥವೇ ಆಗದ ಧಾವಂತ ಅಲ್ಲಿರಲಿಲ್ಲ. ಹುಡುಗ ಹಾಗೂ ಹುಡುಗಿ ಎರಡೂ ಕಡೆಯವರು ಶಾಂತಚಿತ್ತರಾಗಿ
ದಾಂಪತ್ಯದ ಬದುಕಿಗೆ ಹೊಸ ಅರ್ಥವನ್ನೇ ಕಲ್ಪಿಸಿದ ಅದನ್ನೊಂದು ಆಧ್ಯಾತ್ಮದ ಹಂತಕ್ಕೆ ಕೊಡೊಯ್ದ ಮಂತ್ರ
ಮಾಂಗಲ್ಯ ವಿವಾಹಕ್ಕೆ ಸಂಭ್ರಮದಿಂದ ಸಾಕ್ಷಿಯಾದರು.
ಸರಳವಾದ ವಿವರಣೆ
ಮೂಲಕ ಮಂತ್ರ ಮಾಂಗಲ್ಯ ಆಶಯವನ್ನು ನಿವೃತ್ತ ಪ್ರಾಂಶುಪಾಲ ಬಿ.ಗಣಪತಿ ಉತ್ತುಂಗ ಸರಳವಾಗಿ ಮನಮುಟ್ಟುವಂತೆ
ವಿವರಿಸಿದರೆ ಉಪನ್ಯಾಸಕ ಬಿದರಗೋಡು ನಾಗೇಶ್ ಅದಕ್ಕೆ ಪೂರಕವಾದ ನಿರೂಪಣೆಯೊಂದಿಗೆ ಸಹಕರಿಸಿದರು. ಮಂತ್ರಮಾಂಗಲ್ಯವೆಂದರೆ
ಈಗಿನ ಪೀಳಿಗೆ ಬಯಸುವ ಯಾವುದೇ ಅಬ್ಬರವಿಲ್ಲ. ಅದು ನೀರಸ ಎಂಬ ರೂಡಿಗತ ನಂಬಿಕೆಯನ್ನು ತೊಡೆದು ಹಾಕುವಂತೆ
ಮಂತ್ರ ಮಾಂಗಲ್ಯ ವೇದ, ಉಪನಿಷತ್ತುಗಳ ಅರ್ಥಪೂರ್ಣ ಮಂತ್ರಗಳು ಹಾಗೂ ಗಂಡು ಹೆಣ್ಣು ಯಾವುದೇ ಭೇದ ಭಾವವಿಲ್ಲದೆ
ಬದುಕಿನಲ್ಲಿ ಸಹಪಯಣಿಗರು ಆಗಿರಬೇಕು ಎಂಬ ಮಹಾನ್ ಆಶಯವನ್ನು ಹೊಂದಿದೆ ಎಂಬುದನ್ನು ಆಹ್ವಾನಿತರ ಎದುರು
ಪ್ರಸ್ತುತ ಪಡಿಸುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮಕ್ಕೂ
ಮೊದಲು ಅತ್ಯಂತ ಅರ್ಥಪೂರ್ಣ ಗೀತೆಗಳನ್ನು ನಾದಮಣಿ ನಾಲ್ಕೂರು ಸಾಂದರ್ಭಿಕವಾಗಿ ಸಾದರಪಡಿಸಿ ಪ್ರೇಕ್ಷಕರ
ಗಮನ ಸೆಳೆದರು. ಪತ್ರಕರ್ತ ಮೋಹನ್ ಮುನ್ನೂರು ಕುವೆಂಪು ಅವರ ತೆರೆದಿದೆ ಮನೆ ಬಾ ಓ ಅತಿಥಿಯನ್ನು ಆರಂಭಗೀತೆಯಾಗಿ
ಹಾಡಿದರು.
