ಕಾರ್ಮಿಕ ವರ್ಗದ ಶ್ರಮ ಅಸಾಧಾರಣವಾದುದು - ಆರಗ
ಕಾರ್ಮಿಕ ವರ್ಗದ ಪರಿಶ್ರಮ ಇಲ್ಲದೆ ಯಾವುದೇ ಕೆಲಸವೂ ಅಸಾಧ್ಯ, ನಾಡನ್ನು ಕಟ್ಟಲು ಬೆಳೆಸಲು ತೆರೆಮರೆಯಲ್ಲಿ ಅವರು ಪಡುವ ಪರಿಶ್ರಮ ಅಸಾಧಾರಣವಾದುದು. ಅವರನ್ನು ಸದಾಕಾಲ ನೆಮ್ಮದಿಯಲ್ಲಿ ಇಡುವ ಕಾರ್ಯ ಸರ್ಕಾರಗಳಿಂದ ಆಗಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಇತ್ತೀಚೆಗೆ ಕಾರ್ಮಿಕ ಇಲಾಖೆ ವತಿಯಿಂದ ತೀರ್ಥಹಳ್ಳಿಯ ಲಯನ್ಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಗಾರದಲ್ಲಿ ಕಾರ್ಮಿಕರಿಗೆ ಕಿಟ್ ವಿತರಿಸಿ ಮಾತನಾಡಿದ ಅವರು ಶ್ರಮಿಕರ ಕೌಶಲ್ಯವನ್ನು ವರ್ಧಿಸುವ ಮತ್ತು ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ ಎಂದು ಕರೆ ನೀಡಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ಮಾತನಾಡಿ, ಸರ್ಕಾರ ಕಾರ್ಮಿಕರ ಸಮಗ್ರ ಏಳಿಗೆಗೆ ಸಹಕಾರ ನೀಡುವ ವತಿಯಿಂದ ಆರೋಗ್ಯವು ಸೇರಿದಂತೆ ಹತ್ತು ಹಲವು ಯೋಜನೆಯನ್ನು ರೂಪಿಸಿದೆ. ಕಿಟ್ ವಿತರಣೆ ಮೂಲಕ ಅವರ ಕೌಶಲ್ಯವನ್ನು ಹೆಚ್ಚು ಮಾಡುವ ಮತ್ತು ಶ್ರಮವನ್ನು ಹಗುರಗೊಳಿಸುವ ಪ್ರಯತ್ನ ನಡೆದಿದೆ ಎಂದರು.
ಪೃಥ್ವಿಶ್ರಮ ಕಾರ್ಮಿಕ ಸಂಘದ ಕಾರ್ಯದರ್ಶಿ ಮಂಜುನಾಥ ಮಾತನಾಡಿ, ಸರ್ಕಾರದ ಸವಲತ್ತುಗಳನ್ನು ಕೊಡಿಸುವ ನೆಪದಲ್ಲಿ ಮುಗ್ದ ಕಾರ್ಮಿಕರನ್ನು ಮೋಸಗೊಳಿಸಲಾಗುತ್ತಿದೆ. ಇದಕ್ಕೆ ಯಾರು ಬಲಿಯಾಗದೆ ಅಧಿಕೃತವಾಗಿ ಕಾರ್ಮಿಕ ಇಲಾಖೆ ಹಾಗೂ ಕಾರ್ಮಿಕ ಸಂಘವನ್ನು ಪ್ರತಿನಿಧಿಸುವ ವ್ಯವಸ್ಥೆಯ ಮೂಲಕವೇ ಈ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ತೀರ್ಥಹಳ್ಳಿ ಕಾರ್ಮಿಕ ಇಲಾಖೆ ನಿರೀಕ್ಷಕಿ ಸುಖಿತಾ ಇನ್ನಿತರರು ಉಪಸ್ಥಿತರಿದ್ದರು. 300ಕ್ಕೂ ಹೆಚ್ಚು ಕಾರ್ಮಿಕರಿಗೆ ಈ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ ಕಿಟ್ ವಿತರಿಸಿದರು.