ಉಚಿತ ಪಂಪ್ಸೆಟ್ ಸಂಪರ್ಕ ಪಡೆದ ರೈತರ ಆಧಾರ್ ನೊಂದಾಣಿ ಕಡ್ಡಾಯ.
ಅರಣ್ಯ ಇಲಾಖೆಯಿಂದ ಸಮಗ್ರ ರೈತಸ್ನೇಹಿ ಅರಣೀಕರಣ
ಸರ್ಕಾರದ ರೈತಸ್ನೇಹಿ ಯೋಜನೆಯ ಬಗ್ಗೆ ಸೂಕ್ತ ಮಾಹಿತಿ ಸಿಗುತ್ತಿಲ್ಲ. ಇದನ್ನು ಮನಗಂಡು ಕೃಷಿಕ ಸಮಾಜ ರೈತರಿಗೆ ಮಾಹಿತಿ ಕಾರ್ಯಗಾರ ಹಮ್ಮಿಕೊಂಡಿದೆ. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬುಧವಾರ ಹೊನ್ನೇತಾಳು ಗ್ರಾಮದ ಪ್ರಗತಿಪರ ಕೃಷಿಕ ಮೇದೊಳಿಗೆ ರಾಮಸ್ವಾಮಿ ಅವರ ಕೃಷಿ ಜಮೀನು ಆವರಣದಲ್ಲಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ನಡೆದ ಮಾಹಿತಿ ಕಾರ್ಯಗಾರದಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು.
“ಆರ್ಟಿಸಿ ದಾಖಲೆ ಮಾಹಿತಿ ನೀಡಿ 10 ಎಚ್.ಪಿ. ಒಳಗಿನ ಪಂಪ್ಸೆಟ್ ವಿದ್ಯುತ್ ಸಂಪರ್ಕ ಪಡೆದಿರುವ ರೈತ ಕುಟುಂಬದ ಸದಸ್ಯರು ಆಧಾರ್ ನೊಂದಣಿ ಮಾಡುವುದು ಕಡ್ಡಾಯವಾಗಿದೆ. ನೊಂದಾಣಿಯನ್ನು ಇಲಾಖೆಯ ಉಪಯೋಗಕ್ಕೆ ಮಾತ್ರ ಬಳಕೆ ಮಾಡಲಾಗುತ್ತದೆ. ರೈತರು ಆತಂಕ ಪಡುವ ಅಗತ್ಯ ಇಲ್ಲ” ಎಂದು ಮೆಸ್ಕಾಂ ಎಇಇ ಪ್ರಶಾಂತ್ಕುಮಾರ್ ತಿಳಿಸಿದರು.
“ಹೆಣ್ಣು ಕರು ಜನನಕ್ಕೆ ಪ್ರನಾಳ ವೀರ್ಯವನ್ನು ವಿತರಿಸಲಾಗುತ್ತಿದೆ. ಪ್ರತಿ ವೀರ್ಯಕ್ಕೆ 250 ರೂಪಾಯಿ ಶುಲ್ಕ ನಿಗಧಿಪಡಿಸಲಾಗಿದೆ. ಉಚಿತ ವಿತರಣೆಗೆ ಬಾರಿ ಬೇಡಿಕೆ ಇದೆ. ಎಸ್ಎಸ್ಎಲ್ಸಿ ವಿದ್ಯಾರ್ಹತೆ ಪಡೆದ ಯುವಕರಿಗೆ ಜಾನುವಾರು ಆರೈಕೆ ತರಬೇತಿ ನೀಡಲಾಗುತ್ತಿದೆ. ಆಸಕ್ತರು ಇಲಾಖೆಯನ್ನು ಸಂಪರ್ಕಿಸಬಹುದು” ಎಂದು ಪಶು ಸಂಗೋಪಾನ ಇಲಾಖೆ ಸಹಾಯಕ ನಿರ್ದೇಶಕ ಡಾ.ನಾಗರಾಜ್ ತಿಳಿಸಿದರು.
“ಹವಾಮಾನ ಆಧಾರಿತ ಬೆಳೆ ವಿಮೆ ನೋಂದಣಿ ಜುಲೈ 31 ಕೊನೆಯ ದಿನವಾಗಿದೆ. ಅಡಿಕೆ ಸಂಸ್ಕರಣೆ, ಯಂತ್ರೋಪಕರಣ ಸಹಾಯಧನ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 2.52 ಕೋಟಿ ಹಣ ಬಿಡುಗಡೆಗೆ ಬಾಕಿ ಇದ್ದು 2024-25ನೇ ಸಾಲಿಗೆ 5 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸಹಾಯಧನ ಪಡೆಯಲು ಪ್ರೂಟ್ ತಂತ್ರಾಂಶದಲ್ಲಿ ಹೆಸರು ನೋಂದಾಣಿ ಕಡ್ಡಾಯ” ಎಂದು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಸೋಮಶೇಖರ್ ಹೇಳಿದರು.
“ಅರಣ್ಯ ಇಲಾಖೆ ರೈತ ಸ್ನೇಹಿಯಾಗಿ ಅರಣ್ಯೀಕರಣ ಕಾರ್ಯಕ್ರಮ ಹಮ್ಮಿಕೊಂಡಿದ್ದು ಉಚಿತ ಸಸಿ ವಿತರಿಸಲಾಗುತ್ತಿದೆ. ಒಬ್ಬ ರೈತನಿಗೆ 400 ಸಸಿಗಳನ್ನು ಪಡೆಯಲು ಅವಕಾಶ ಇದೆ. ಹೆಚ್ಚು ಮಳೆ ಸುರಿಯುವ ಆಗುಂಬೆ ಭಾಗಕ್ಕೆ ಹೊಂದಿಕೊಳ್ಳುವ ಜಾತಿಯ ಸಸಿಗಳನ್ನು ಅರಣ್ಯ ಇಲಾಖೆ ನರ್ಸರಿಗಳಲ್ಲಿ ಬೆಳೆಸುತ್ತಿದೆ” ಎಂದು ಆಗುಂಬೆ ಉಪ ವಲಯಾರಣ್ಯಧಿಕಾರಿ ಸುನಿಲ್ ಮಾಹಿತಿ ನೀಡಿದರು.
ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್, ಕೃಷಿಕ ಸಮಾಜದ ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್, ಉಪಾಧ್ಯಕ್ಷ ಕಿಮ್ಮನೆ ಕೃಷ್ಣಮೂರ್ತಿ, ಜಿಲ್ಲಾ ಸಮಿತಿ ನಿರ್ದೇಶಕ ಹಾಲಿಗೆ ನಾಗರಾಜ್, ಪ್ರಮುಖರಾದ ವಡೇಗದ್ದೆ ಕೃಷ್ಣಮೂರ್ತಿ, ಸಿ.ಬಿ.ಈಶ್ವರ್ , ಶಚೀಂದ್ರ ಹೆಗ್ಡೆ , ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್ ಇದ್ದರು.