ಜನರ ಧ್ವನಿಯಾಗಿ ಕೆಲಸ ಮಾಡುವೆ - ಗೀತಾ ಶಿವರಾಜ್ ಕುಮಾರ್
15 ವರ್ಷ ಬಿ.ವೈ. ರಾಘವೇಂದ್ರ ಏನ್ ಮಾಡಿದ್ರು
ಬಗರ್ ಹುಕುಂ, ಅರಣ್ಯ ಸಾಗುವಳಿಗೆ ಪರಿಹಾರ ಕೊಟ್ರಾ - ಮಧು ಬಂಗಾರಪ್ಪ
ಬಂಗಾರಪ್ಪ ಅಶಯದಂತೆ ಜನರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ತಂದೆಯಿಂದಲೇ ರಾಜಕಾರಣ ಕಲಿತಿದ್ದು ಎದುರಿಸುವ ತಾಕತ್ತು, ಧೈರ್ಯ ನನಗಿದೆ. ನನ್ನೊಂದಿಗೆ ಕಾಂಗ್ರೆಸ್ ಪಕ್ಷ ಮತ್ತು ಜನರಿದ್ದಾರೆ. ಹೆದರಿ ರಾಜಕಾರಣ ಮಾಡುವ ಪ್ರಶ್ನೆಯೇ ಇಲ್ಲ. ಎಲ್ಲಾ ಸವಾಲುಗಳನ್ನು ಎದುರಿಸಿ ಶಿವಮೊಗ್ಗ ಜಿಲ್ಲೆಯ ಜನರ ಸಮಸ್ಯೆಗಳಿಗೆ ಪರಿಹಾರ ಕೊಡಿಸುತ್ತೇನೆ ಎಂದು ಭಾನುವಾರ ಕೆಟಿಕೆ ಸಭಾಂಗಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಯ ಮೂಲಕ ಮಹಿಳೆಯರು, ಬಡವರನ್ನು ಮೇಲಕ್ಕೆತ್ತುವ ಯೋಜನೆ ಜಾರಿಗೊಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳ ಮೇಲೆ ಜನರು ವಿಶ್ವಾಸ ಇಟ್ಟಿದ್ದಾರೆ. ಒಂದು ಅವಕಾಶ ಮಾಡಿಕೊಟ್ಟು ಜನರ ಸೇವೆಗೆ ಅವಕಾಶ ನೀಡಬೇಕೆಂದು ಕೋರಿದರು.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ಬಿಜೆಪಿ ಪಕ್ಷಕ್ಕೆ ಜನರಿಂದ ನೈತಿಕವಾಗಿ ಮತ ಕೇಳುವ ಯೋಗ್ಯತೆ ಇಲ್ಲ. ಸಮಾಜದಲ್ಲಿ ಕೋಮು ಗಲಭೆಯಂತಹ ಭಾವನಾತ್ಮಕ ವಿಚಾರಗಳನ್ನು ಕೆದಕಿ ಜನರನ್ನು ಭಯದಲ್ಲಿ ಇಟ್ಟಿದ್ದಾರೆ. 40% ಕಮಿಷನ್ ಪಡೆದ ಹಣದಲ್ಲಿ ಚುನಾವಣೆ ಎದುರಿಸುವ ಧೈರ್ಯ ಅವರದ್ದಾಗಿದೆ. ಜನರಿಗಾಗಿ ಏನು ಕೆಲಸ ಮಾಡಿಲ್ಲ. 15 ವರ್ಷ ಸಂಸದರಾದ ಬಿ.ವೈ. ರಾಘವೇಂದ್ರ ಕೊಡುಗೆ ಏನು. ಓರ್ವ ಹೆಣ್ಣಿಗೆ ನೀವೇನು ಮಾಡಿದ್ರಿ ಅಂತ ಕೇಳುವ ನೈತಿಕತೆ ನಿಮಗಿದೆಯೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಬಡಜನರ ಹೊಟ್ಟೆಗೆ ಅನ್ನ ಕೊಟ್ಟಿದೆ. ಬಿಜೆಪಿ ಜನರ ಉದ್ಯೋಗವನ್ನೇ ಕಸಿದುಕೊಂಡಿದೆ. ವಿಧಾನಸಭೆಯಲ್ಲಿ ಹೇಳಿದಂತೆ ಅರಣ್ಯ ಸಾಗುವಳಿದಾರರ ಪರವಾಗಿ ಕೆಲಸ ಮಾಡುತ್ತಿದ್ದೇನೆ. ಭೂಮಿ ಹಕ್ಕು ನೀಡಲು ರಾಜ್ಯ ಸರ್ಕಾರ ಸಿದ್ಧವಾಗಿದ್ದು ಕೇಂದ್ರ ಸರ್ಕಾರದ ಅನುಮತಿ ಬೇಕು. ಜನರು ಕಾಂಗ್ರೆಸ್ ಪಕ್ಷ ಬೆಂಬಲಿಸಿದರೆ ಭೂಮಿ ಹಕ್ಕು ನೀಡಲು ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಟ ಶಿವರಾಜಕುಮಾರ್ ಮಾತನಾಡಿ, ಓರ್ವ ನಟನಾಗಿ ತೀರ್ಥಹಳ್ಳಿಗೆ ಬಂದಿಲ್ಲ. ಸಾಮಾನ್ಯ ವ್ಯಕ್ತಿಯಾಗಿ ಬಂದಿದ್ದೇನೆ. ಮನಸ್ಸಿದ್ದರೆ ಏನು ಬೇಕಾದರೂ ಮಾಡಬಹುದು. ಗೀತಾ ಗೆಲ್ಲಿಸಿಕೊಟ್ಟರೆ ಜಿಲ್ಲೆಯ ಸಮಸ್ಯೆಗಳಿಗೆ ನಾನು ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದರು.
ಆಯನೂರು ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವಿನ ವಾತಾವರಣ ಇದೆ. ಹೀಗಾಗಿ ಬಿಜೆಪಿ, ಆರ್.ಎಸ್.ಎಸ್.ಗೆ ಹೆದರಿಕೆ ಶುರುವಾಗಿದೆ. ಅದಕ್ಕಾಗಿಯೇ ಈಶ್ವರಪ್ಪ ಬಂಡಾಯ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಹಿಂದುಳಿತ ವರ್ಗ, ದಲಿತರ ಮತ ಒಡೆಯುವ ಉದ್ದೇಶದಿಂದಲೇ ಬಿಜೆಪಿ ಬಂಡಾಯದ ನಾಟಕ ಆರಂಭಿಸಿದ್ದಾರೆ ಎಂದರು.
ನಟ ಶಿವರಾಜಕುಮಾರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕರಾದ ಆಯನೂರು ಮಂಜುನಾಥ, ಆರ್. ಪ್ರಸನ್ನ ಕುಮಾರ್, ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಕಾಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಮುಖಂಡ ಕಡ್ತೂರು ದಿನೇಶ್ ಮಾತನಾಡಿದರು.