ಅಗ್ನಿಶಾಮಕ ಅಧಿಕಾರಿ ಜಿ. ಮಹಾಲಿಂಗಪ್ಪ ಲೋಕಾಯುಕ್ತ ಬಲೆಗೆ
ಕಾರು ಸುಟ್ಟುಹೋದ ಪ್ರಕರಣದಲ್ಲಿ ವಿಮಾ ಕಂಪನಿಗೆ ಕ್ಲೇಮು ಮಾಡಲು ವರದಿ (ಫೈರ್ ರಿಪೋರ್ಟ್) ಕೊಡಲು 5000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಜಿ.ಮಹಾಲಿಂಗಪ್ಪ ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಇಲ್ಲಿನ ಗೋಪಿಶೆಟ್ಟಿಕೊಪ್ಪದ ನಿವಾಸಿ ಇರ್ಷಾದ್ ಅವರು 2023ರ ಸೆಪ್ಟೆಂಬರ್ 25ರಂದು ರಾತ್ರಿ ತಮ್ಮ ಫೋರ್ಡ್ ಕಾರಿನಲ್ಲಿ ಮಂಡಗದ್ದೆಯಿಂದ ಶಿವಮೊಗ್ಗಕ್ಕೆ ಬರುವಾಗ 15ನೇ ಮೈಲಿಗಲ್ಲು ಬಳಿ ಅದಕ್ಕೆ ವಿದ್ಯುತ್ ಶಾರ್ಟ್ ಸರ್ಕೀಟ್ನಿಂದ ಬೆಂಕಿ ಹತ್ತಿಕೊಂಡಿತ್ತು ಎನ್ನಲಾಗಿದೆ.
ಕಾರಿನ ವಿಮಾ ಮೊತ್ತ ಪಡೆಯಲು ಇರ್ಷಾದ್, ಯುನೈಟೆಡ್ ಇನ್ಶೂರೆನ್ಸ್ ಕಂಪನಿಗೆ ಕ್ಲೇಮು ಮಾಡಿದ್ದರು. ಅದಕ್ಕೆ ಅಗತ್ಯವಿರುವ ವರದಿ ಪಡೆಯಲು ಜಿಲ್ಲಾ ಅಗ್ನಿಶಾಮಕ ಅಧಿಕಾರಿಯನ್ನು ಸಂಪರ್ಕಿಸಿದ್ದರು. ವರದಿ ಕೊಡಲು ಮಹಾಲಿಂಗಪ್ಪ ಲಂಚ ಕೇಳಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ಇರ್ಷಾದ್, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಶಿವಮೊಗ್ಗದ ಜಿಲ್ಲಾ ಅಗ್ನಿಶಾಮಕ ಠಾಣೆಯ ಕಚೇರಿಯಲ್ಲಿ ಮಹಾಲಿಂಗಪ್ಪ ಲಂಚದ ಮೊತ್ತ ಪಡೆಯುವಾಗ ಲೋಕಾಯುಕ್ತ ಡಿವೈಎಸ್ಪಿ ಉಮೇಶ ಈಶ್ವರ ನಾಯ್ಕ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲಂಚದ ಹಣದೊಂದಿಗೆ ಸಿಕ್ಕಿಬಿದ್ದ ಮಹಾಲಿಂಗಪ್ಪ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.