ಜಾತ್ಯಾತೀತ ನಿಲುವಿನಿಂದಲೇ ಬದುಕಿದ ವ್ಯಕ್ತಿತ್ವ
ವರಾಹಿ ಸಂತ್ರಸ್ತರಿಗೆ ಆಸರೆಯಾದ ಮುತ್ಸದಿ ರಾಜಕಾರಣಿ ಡಿ.ಬಿ. ಚಂದ್ರೇಗೌಡ
ಶಾಸಕಾಂಗದ ನಾಲ್ಕು ಸದನಗಳಲ್ಲಿ ಕಾರ್ಯ ನಿರ್ವಹಿಸಿದ್ದ ಮುತ್ಸದಿ ರಾಜಕಾರಣಿ, ತೀರ್ಥಹಳ್ಳಿ ಕ್ಷೇತ್ರದ ಮಾಜಿ ಶಾಸಕ ಡಿ.ಬಿ. ಚಂದ್ರೇಗೌಡರ ಅಗಲಿಕೆ ನೋವುಂಟು ಮಾಡಿದೆ. ದ್ವೇಷರಹಿತ ಜಾತ್ಯಾತೀತ ನಿಲುವಿನಿಂದ ಜನಮಾನದಲ್ಲಿ ನೆಲೆ ಊರಿರುವ ಆದರ್ಶ ಜನಪ್ರತಿನಿಧಿ ಚಂದ್ರೇಗೌಡ. ವರಾಹಿ ಮುಳುಗಡೆ ಸಂತ್ರಸ್ತರ ಬಗೆಗಿನ ವಿಶೇಷ ಕಾಳಜಿಯಿಂದ ಸರ್ಕಾರದ ಹಂತದಲ್ಲಿ ಹೆಚ್ಚಿನ ಪರಿಹಾರ ಕೊಡಿಸಿದ್ದರು ಎಂದು ಎಂದು ಸಂಚಾಲಕ ಡಿ.ಎಸ್. ವಿಶ್ವನಾಥ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ನೆನಪಿಸಿಕೊಂಡರು.
ಕಾಂಗ್ರೆಸ್, ಜನತಾ ಪರಿವಾರ, ಬಿಜೆಪಿ ಪಕ್ಷಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು ಯಾವ ಸಿದ್ಧಾಂತಕ್ಕೂ ಅಂಟಿಕೊಳ್ಳದೇ ತಾನು ನಂಬಿದ ಸೈದ್ದಾಂತಿಕ ನಿಲುವಿನಿಂದಲೇ ರಾಜಕಾರಣವನ್ನು ಮಾಡಿದ್ದಾರೆ. ರಾಜ್ಯ, ದೇಶದಲ್ಲಿ ಅತೀ ದೊಡ್ಡ ಹುದ್ದೆ ಅಲಂಕರಿಸಿ ಆಡಳಿತದ ಭಾಗವಾಗಿದ್ದರೂ ದ್ವೇಶ ರಾಜಕಾರಣ ಮಾಡಲಿಲ್ಲ ಎಂದು ಹೇಳಿದರು.
ವಿಧಾನಸಭಾಧ್ಯಕ್ಷ ಹುದ್ದೆಯಲ್ಲಿದ್ದಾಗ ಲಂಡನ್ನ ಕನ್ನಿಂಗ್ ಹ್ಯಾಮ್ ಅರಮನೆಯಲ್ಲಿ ನಡೆದ ಸ್ಪೀಕರ್ ಗಳ ಸಮಾವೇಶದ ಉಪಾಧ್ಯಕ್ಷರಾಗಿ ದೇಶದ ಘನತೆ ಎತ್ತಿಹಿಡಿದಿದ್ದಾರೆ. ಕ್ಷೇತ್ರದ ಗ್ರಾಮೀಣ ರಸ್ತೆ, ಸಹ್ಯಾದ್ರಿ ಪಾಲಿಟೆಕ್ನಿಕ್ ಕಾಲೇಜು, ಸಂಪರ್ಕ ಸೇತುವೆಗಳನ್ನು ನೀಡಿದ್ದರು. ಗೋಪಾಲಗೌಡರ ನಂತರ ತೀರ್ಥಹಳ್ಳಿಯ ಘನತೆಯನ್ನು ರಾಜ್ಯ ಗುರುತಿಸುವಂತೆ ಮಾಡಿದ್ದರು ಎಂದರು.
ಚಂದ್ರೇಗೌಡರ ರಾಜಕೀಯ ಅವಧಿಯಲ್ಲಿ ಕ್ಷೇತ್ರಕ್ಕೆ ಮತ್ತು ರಾಜ್ಯಕ್ಕೆ ನೀಡಿದ ಕಾರ್ಯಕ್ರಮ, ಅಭಿವೃದ್ಧಿಯ ಅವಲೋಕನ ದೃಷ್ಟಿಯಿಂದ ನವೆಂಬರ್ 17ರ ಬೆಳಿಗ್ಗೆ 10.30ಕ್ಕೆ ಪಟ್ಟಣದ ಗಾಯತ್ರಿ ಮಂದಿರದಲ್ಲಿ ಡಿಬಿಸಿ ಅಭಿಮಾನಿ ಬಳಗದಿಂದ ಶ್ರದ್ದಾಂಜಲಿ ಸಭೆ ಹಮ್ಮಿಕೊಳ್ಳಲಾಗಿದೆ. ಅಭಿಮಾನಿಗಳು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಡಿ.ಎಸ್. ವಿಶ್ವನಾಥ ಶೆಟ್ಟಿ ಕೋರಿದರು.