ಸಿಂಧುವಾಡಿ ಗ್ರಾಮಸ್ಥರ ಹೋರಾಟಕ್ಕೆ ಹೊಸ ಸ್ವರೂಪ
40 ವರ್ಷದ ಚಳವಳಿಗೆ ಜಯ ಸಿಗುವುದೇ…!
ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಸಿಂಧುವಾಡಿ ಗ್ರಾಮಸ್ಥರ 40 ವರ್ಷದ ಹೋರಾಟಕ್ಕೆ ಹೊಸ
ಸ್ವರೂಪ ನೀಡಬೇಕಿದೆ. ದೇವರ ಕಾಡು ರಕ್ಷಣೆಗೆ ಕಾನೂನು ಹೋರಾಟ ಕೈಗೆತ್ತಿಕೊಳ್ಳಲಾಗುತ್ತದೆ. ಸರ್ವೆ
ನಂಬರ್ 51ಪಿ ರಲ್ಲಿರುವ
ದಟ್ಟ ಅರಣ್ಯ ಪ್ರದೇಶ ರಕ್ಷಣೆ ಎಲ್ಲರ ಹೊಣೆಯಾಗಬೇಕಿದೆ. ಸದರಿ ಪ್ರದೇಶದ ಖಾತೆಯ ಹಕ್ಕು ಯಾರು ಬೇಕಾದರೂ ಹೊಂದಿರಲಿ.
ಚೌಡಮ್ಮ ದೇವಿಯ ಕಾಡು ಮಾತ್ರ ಮೂಲ ಸ್ವರೂಪ ಕಳೆದುಕೊಳ್ಳದೆ ಹಾಗೆ ಉಳಿಯಬೇಕು ಎಂದು ಕರ್ನಾಟಕ ಜೀವವೈವಿಧ್ಯ
ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.
ಹೈಕೋರ್ಟ್, ಕೆಇಟಿ ನ್ಯಾಯಾಲಯದಲ್ಲಿ ಕಾಡು ಸಂರಕ್ಷಣೆ ಮಾಡುವ ಗ್ರಾಮಸ್ಥರ ಹೋರಾಟಕ್ಕೆ ಖಂಡಿತ ನ್ಯಾಯ ಸಿಗುತ್ತದೆ. ಎಲ್ಲರೂ ಕಾನೂನು ಹೋರಾಕ್ಕೆ ಕೈಜೋಡಿಸಬೇಕು ಎಂದು ಸಿಂಧುವಾಡಿ ಗ್ರಾಮದ ಸುಮಾರು 300 ಎಕರೆ ವ್ಯಾಪ್ತಿಯಲ್ಲಿರುವ ಜೌಡಮ್ಮ ದೇವರ ಕಾಡು ಪ್ರದೇಶ ವೀಕ್ಷಿಸಿ ಮಂಡಗದ್ದೆ ವಲಯಾರಣ್ಯ ವಿಭಾಗದ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ದಟ್ಟಾರಣ್ಯ ಪ್ರದೇಶ
2 ಜನರ ಹೆಸರಿಗೆ ತಲಾ 74 ಎಕರೆಯಂತೆ
ಅರ್ಟಿಸಿ ದಾಖಲೆಯಲ್ಲಿ ಖಾತೆ ನಮೂದಾಗಿದೆ. ಸರ್ಕಾರದಿಂದ ಖಾಸಗಿ ವ್ಯಕ್ತಿಗಳಿಗೆ ಖಾತೆ ಹೇಗೆ ನಮೂದಾಗಿದೆ
ಎಂಬುದಕ್ಕೆ ಸ್ಪಷ್ಟ ದಾಖಲೆಗಳಿಲ್ಲ. 1990ರಲ್ಲಿ ಸರ್ವೆ
ನಂಬರ್ 51 ರಲ್ಲಿ 124 ಎಕರೆ ಅಧಿಸೂಚಿತ
ಪ್ರದೇಶವಾಗಿ ಘೋಷಣೆಯಾಗಿದೆ. ಅರ್ಟಿಸಿಯಲ್ಲಿ ತಪ್ಪಾಗಿ ದಾಖಲಾಗಿರುವ ವ್ಯಕ್ತಿಗಳ ಹೆಸರನ್ನು ರದ್ದು ಮಾಡಬೇಕು ಎಂದು
ಗ್ರಾಮಸ್ಥರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಹೋರಾಟಗಾರರಾದ ಶ್ರೀಪಾದ್ ಬಿಚ್ಚುಗತ್ತಿ, ಅನಗವಳ್ಳಿ ಸುಬ್ಬರಾವ್, ವೆಂಕಟೇಶ್, ಮಂಡಗದ್ದೆ ಗ್ರಾ.ಪಂ. ಸದಸ್ಯರಾದ ಸಿಂಧುವಾಡಿ ಸತೀಶ್, ಪುಟ್ಟೋಡ್ಲು ರಾಘವೇಂದ್ರ, ಅರ್ಎಫ್ಓ ಆದರ್ಶ, ಪ್ರಮುಖರಾದ ದೀಪಕ್, ಸುರೇಶ್ ಇದ್ದರು.