5ನೇ ಬಾರಿ ಶಾಸಕರಾದ ಆರಗ ಜ್ಞಾನೇಂದ್ರ
ಬಿಜೆಪಿಯಲ್ಲಿ ಗೆಲುವಿನ ಉತ್ಸಾಹ – ಕಿಮ್ಮನೆಗೆ ಕಹಿ
ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ
ಬಿಜೆಪಿ ಪಕ್ಷ ಕಟ್ಟಿದ ಹುರಿಯಾಳು ಆರಗ ಜ್ಞಾನೇಂದ್ರ ತೀರ್ಥಹಳ್ಳಿ ಕ್ಷೇತ್ರದಿಂದ 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. 10ನೇ ಬಾರಿ ಒಂದೇ ಪಕ್ಷ ಒಂದೇ ಚಿಹ್ನೆಯಡಿ ನಿಂತು ವಿರೋಧ ಪಕ್ಷಕ್ಕೆ ಸವಾಲೇಸುದು ಗೆಲುವಿನ ನಗೆ ಬೀರಿದ್ದಾರೆ.
ವಿದ್ಯಾರ್ಥಿ ಜೀವನದಲ್ಲಿ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದ ಅವರು 1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 6 ತಿಂಗಳು ಜೈಲು ವಾಸ ಅನುಭವಿಸಿದ್ದರು. ಜೈಲಿನಿಂದ ಬಿಡುಗಡೆಯಾದ ಮೇಲೆ ಸಾರ್ವಜನಿಕ ಜೀವನದಲ್ಲಿ ಮುಂದುವರೆಯಬೇಕೆಂಬ ನಿರ್ಧಾರ ತೆಗೆದುಕೊಂಡಿದ್ದರು. ಜನರ ಸಮಸ್ಯೆ ಪರಿಹರಿಸಿ ಅದರ ಆನಂದದಿಂದ ಖುಷಿ ಪಟ್ಟಿದ್ದಾರೆ. 1978ರಲ್ಲಿ ಈಗಿನ ವಿರೋಧ ಪಕ್ಷದ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ವಿರುದ್ಧ ಪರಾಭವಗೊಂಡರು ಹಿಂದೇಟು ಹಾಕದೆ ಮುನ್ನುಗ್ಗಿದರು. ದೇಶದಾದ್ಯಂತ ಹಬ್ಬಿದ ವಿದ್ಯಾರ್ಥಿ ಚಳುವಳಿಯ ಭಾಗವಾಗಿ 1984ರಲ್ಲಿಯೇ ಬಿಜೆಪಿ ಪಕ್ಷದಿಂದ ವಿಧಾನಸಭಾ ಚುನಾವಣೆ ಸ್ಪರ್ಧಿಸಿ ಸೋಲುಂಡಿದ್ದರು.
1987ರಲ್ಲಿ ಮೊದಲ ಬಾರಿಗೆ ಜಿಲ್ಲಾ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 1994, 1999, 2004ನೇ ಸಾಲಿನ ಮೂರು ಬಾರಿ ಶಾಸಕರಾಗಿ ತೀರ್ಥಹಳ್ಳಿ ಜನತೆಯ ಸೇವೆ ಮಾಡಿದ್ದಾರೆ. ನಂತರ 2008ರಲ್ಲಿ ಕಿಮ್ಮನೆ ವಿರುದ್ಧ ಸೋತರು ಹೋರಾಟ ಬಿಡದ ಆರಗ ಜ್ಞಾನೇಂದ್ರ 2018ರಲ್ಲಿ ಮತ್ತೆ ಗೆಲುವು ಸಾಧಿಸುವ ಮೂಲಕ ರಾಜ್ಯದ ಎರಡನೇ ಅತೀ ದೊಡ್ಡ ಹುದ್ದೆ ಗೃಹಖಾತೆ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ನಿರಂತರ ಹೋರಾಟದ ಬದುಕು ನಡೆಸಿದ ಅವರು ಎಂಪಿಎಂ ಅಧ್ಯಕ್ಷ, ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ, ಕರ್ನಾಟಕ ಗೃಹಮಂಡಳಿ ಅಧ್ಯಕ್ಷ, ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿ ಸೇವೆ ಮಾಡಿದ್ದಾರೆ. ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಕಳೆದ 5 ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ 3254 ಕೋಟಿ ಅನುದಾನ ತಂದಿದ್ದಾರೆ. ಕ್ಷೇತ್ರದಾದ್ಯಂತ
ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಈ ಬಾರಿ ಚುನಾವಣೆಯಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು
ಮುಂದಿಟ್ಟುಕೊಂಡೆ ಮತಯಾಚನೆ ಮಾಡಿ ಆರಗ ಗಮನ ಸೆಳೆದಿದ್ದರು. ಮತಯಾಚನೆ ಸಂದರ್ಭ ಜನರು ಹೆಚ್ಚಿನ ಬೆಂಬಲವನ್ನು
ಸೂಚಿಸಿ ಗೆಲುವಿಗಾಗಿ ಹರಸಿ ಹಾರೈಸಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ 12080
ಮತಗಳಿಂದ ಭರ್ಜರಿ ಜಯಗಳಿಸಿದ್ದಾರೆ.