ಶರಾವತಿ ಸಂತ್ರಸ್ತರ ಪೈಲು ಡೆಲ್ಲಿಗೆ ನಿನ್ನೆ ರವಾನೆ

ಸದ್ಯದಲ್ಲೇ ಹಕ್ಕುಪತ್ರ ಗ್ಯಾರಂಟಿ – ಗೃಹಸಚಿವ ಆರಗ ಘೋಷಣೆ
ಕುಕ್ಕರ್‌ ಬಾಂಬ್‌ ಭಯೋತ್ಪಾದಕರಿಗೆ ತೀರ್ಥಹಳ್ಳಿ ಮಾಜಿ ಸಚಿವರ ಶ್ರೀರಕ್ಷೆ -ಸಿ.ಟಿ. ರವಿ ಕಿಡಿನುಡಿ
ಆರ್‌ಎಂಎಂ-ಕಿಮ್ಮನೆ ಒಂದಾಗುವುದು ಎಂದಿಗೂ ಸಾಧ್ಯವಿಲ್ಲ -ಕೆ.ಎಸ್.‌ ಈಶ್ವರಪ್ಪ ವ್ಯಂಗ್ಯ

ಕಾಂಗ್ರೆಸ್‌ ಅವಧಿಯಲ್ಲಿ ಅವೈಜ್ಞಾನಿಕ ಕಸ್ತೂರಿ ರಂಗನ್‌ ವರದಿ ನೀಡಿ ಮನೆನಾಡಿನ ರೈತರ ಒಕ್ಕಲೆಬ್ಬಿಸುವುದಕ್ಕೆ ಆಹ್ವಾನ ನೀಡಿದ್ದರು. ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಹಸಿರುಪೀಠಕ್ಕೆ ಪ್ರಕರಣ ವರ್ಗಾಯಿಸಲಾಗಿತ್ತು. ನನ್ನ ತೀವ್ರ ವಿರೋಧದಿಂದ ಕಸ್ತೂರಿ ರಂಗನ್‌ ವರದಿ ಜಾರಿಯಾಗದಂತೆ ತಡೆದಿದ್ದೇನೆ. ದೇಶ ಆಳಿ ರೈತರ ರಕ್ತ ಹಿಂಡಿದ ಕಾಂಗ್ರೆಸ್‌ ಜನರ ಕಿವಿಗೆ ಹೂ ಇಡುತ್ತಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಅರಾಜಕಥೆ ಸೃಷ್ಟಿಯಾಗಲಿದೆ. ಶರಾವತಿ ಮುಳುಗಡೆ ಸಂತ್ರಸ್ತರ ಕಡತ ನಿನ್ನೆ (ಮಂಗಳವಾರ) ತಯಾರಾಗಿದ್ದು ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಘೋಷಿಸಿದ್ದಾರೆ.

ತೀರ್ಥಹಳ್ಳಿಯ ಎಪಿಎಂಸಿ ಸಮೀಪ ಬಿಜೆಪಿ ಪಕ್ಷದ ಜಿಲ್ಲಾ ಮಟ್ಟದ ರೈತ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಕಾಂಗ್ರೆಸ್‌ ಕಳೆದ 60 ವರ್ಷದಲ್ಲಿ ಮಾಡದ ಅಭಿವೃದ್ದಿಯನ್ನು ಬಿಜೆಪಿ ಮಾಡಿ ತೋರಿಸಿದೆ. ರೈತರ ಪರಿಸ್ಥಿತಿ ಅಭೂತಪೂರ್ವ ರೀತಿಯಲ್ಲಿ ಸುಧಾರಿಸಿದೆ. ಬೆಳೆಗಳಿಗೆ ಒಳ್ಳೆ ಬೆಲೆ ದೊರೆತು ಮಧ್ಯವರ್ತಿಗಳ ಹಾವಳಿ ದೂರವಾಗಿದೆ ಎಂದು ವಿವರಿಸಿದರು.

ಶಿವಮೊಗ್ಗ ಜಿಲ್ಲೆ ವೈಚಾರಿಕ ಶಕ್ತಿಗೆ, ಚಿಂತನೆಗೆ ಹೆಸರು ವಾಸಿಯಾಗಿದೆ. ತೀರ್ಥಹಳ್ಳಿಯಂತಹ ಪ್ರದೇಶ ರಾಷ್ಟ್ರಪ್ರೇಮವನ್ನು ಉಕ್ಕಿಸಬೇಕಾಗಿತ್ತು. ಆದರೆ ಇಲ್ಲಿನ ಮಾಜಿ ಸಚಿವರೊಬ್ಬರು ಕುಕ್ಕರ್‌ ಬಾಂಬ್‌ ಇಡುವವರ ಸಂತತಿಗೆ ಆಶ್ರಯ ನೀಡಿದ್ದಾರೆ ಎಂದು ತೀಕ್ಷ ವಾಗ್ದಾಳಿ ನಡೆಸಿದರಲ್ಲದೇ ಭಾರತದಲ್ಲಿ ಬ್ಯಾಲೆಟ್‌ ಮೂಲಕ ಪ್ರಜಾಪ್ರಭುತ್ವ ಉಳಿದಿದೆ. ನಕ್ಸಲ್‌, ಬುಲೆಟ್‌ ವಾದ ಈಗ ನೆಲಕಚ್ಚಿದೆ. ಡಿ.ಜೆ. ಹಳ್ಳಿ, ಕೆ.ಜೆ. ಹಳ್ಳಿ ಘಟನೆಯಲ್ಲಿ ಪಾಲ್ಗೊಂಡವರು ನಮ್ಮ ಸಹೋದರರು ಎಂಬ ಹೇಳಿಕೆ ನೀಡುವ ಕೆಪಿಸಿಸಿ ಅಧ್ಯಕ್ಷರು ಯಾರ ಪರ ಎನ್ನುವುದನ್ನು ಜನತೆ ಈಗಾಗಲೇ ತೀರ್ಮಾನಿಸಿದ್ದಾರೆ ಎಂದರು.

ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಜೋಡಿ ಯಾವುದೇ ಕಾರಣಕ್ಕೂ ಒಂದಾಗಲ್ಲ. ಕ್ಷೇತ್ರದಲ್ಲೂ ಕಿಮ್ಮನೆ ರತ್ನಾಕರ, ಆರ್.ಎಂ. ಮಂಜುನಾಥ ಗೌಡ ಒಂದಾಗಲು ಸಾಧ್ಯವೇ ಇಲ್ಲ. ಬಿಜೆಪಿ ಭಾರತದ ಹಿಂದೂ ಧರ್ಮ ಉಳಿಸುವ ಪ್ರಮಾಣಿಕ ಪ್ರಯತ್ನ ಮಾಡಿದೆ. ಹಿಂದೂ ದೇವಾಲಯ ಕೆಡವಿ ಸ್ಥಾಪಿಸಿದ ಮಸೀದಿಗಳನ್ನು ಹಿಂದುಗಳಿಗೆ ಸುಪ್ರೀಂ ಕೋರ್ಟ್ ಪುನರ್‌ ಸ್ಥಾಪನೆಗೆ ಆವಕಾಶ ನೀಡಬೇಕು ಎಂದು ಕೆ.ಎಸ್.‌ ಈಶ್ವರಪ್ಪ ಹೇಳಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಕಾಂಗ್ರೆಸ್‌ ಗ್ಯಾರೆಂಟಿ ಕಾರ್ಡ್‌ ವ್ಯಾಲಿಡಿಟಿ ಮುಗಿದಿದೆ. 70 ವರ್ಷ ಆಡಳಿತದಲ್ಲಿ ಮಾಡದಿರುವುದನ್ನು ಈಗ ಜನರಮುಂದೆ ಇಡುತ್ತಿರುವ ಹಿಂದೆ ಹುನ್ನಾರ ಅಡಗಿದೆ. ಬಿಜೆಪಿ ಸರ್ಕಾರ ಘೋಷಿಸಿದ ಯೋಜನೆಗಳು ಪ್ರತಿ ಮನೆಗೂ ತಲುಪಿದೆ. ಒಂದು ಕುಟುಂಬದಲ್ಲಿ 5 ರಿಂದ 6 ಫಲಾನುಭವಿಗಳ ಪಟ್ಟಿ ತಯಾರು ಮಾಡಬಹುದು. ವಿಶ್ವದ ಏಕೈಕ ಹಿಂದೂ ರಾಷ್ಟ್ರ ರಕ್ಷಣೆ ಮಾಡುವುದು ಹಿಂದುಗಳ ಕರ್ತವ್ಯವಾಗಬೇಕು ಎಂದರು.

ವೇದಿಕೆಯಲ್ಲಿ ಮಾಜಿ ಶಾಸಕ ಸ್ವಾಮಿರಾವ್‌, ಮುಖಂಡರಾದ ಆರ್.ಮದನ್‌, ಬೇಗುವಳ್ಳಿ ಸತೀಶ್‌, ನವೀನ್‌ ಹೆದ್ದೂರು, ಸಾಲೇಕೊಪ್ಪ ರಾಮಚಂದ್ರ, ದತ್ತಾತ್ರಿ, ಬಾಳೇಬೈಲು ರಾಘವೇಂದ್ರ, ಮಹೇಶ್‌ ಹುಲ್ಕುಳಿ, ನಾಗರಾಜ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ನಂತರ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಭರ್ಜರಿ ರೋಡ್‌ ಶೋ ನಡೆಯಿತು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post