ವಾರದೊಳಗೆ ಕೈಗೆ…
ಸ್ಥಳೀಯರ ತೀವ್ರ ಆಕ್ರೋಶ
ಚುನಾವಣೆ ತಯಾರಿ ಕ್ಷೇತ್ರದಲ್ಲಿ ಭರದಿಂದ ಸಾಗಿದೆ. ಕೆಲಸ ಪೂರ್ಣಗೊಳಿಸಿ ವೇಗವಾಗಿ ಬಿಲ್ ಪಡೆಯುವ ಉದ್ದೇಶದಿಂದ ಕಾಮಗಾರಿಗಳ ವೇಗ ಹೆಚ್ಚಿದೆ. ಈ ನಡುವೆ ಮೇಲೆ ಬಿದ್ದು ಕಾಮಗಾರಿಗಳನ್ನು ತರಾತುರಿಯಲ್ಲಿ ಮುಗಿಸುವ ಸಲುವಾಗಿ ಕಳಪೆ ಕಾಮಗಾರಿಗಳ ಸಂಖ್ಯೆ ಹೆಚ್ಚಾದಂತಿದೆ. ಇದಕ್ಕೆ ಉದಾಹರಣೆಯಾಗಿ ತೀರ್ಥಹಳ್ಳಿ ತಾಲೂಕಿನ ನೆರಟೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡೆಮನೆಯಲ್ಲಿ ನಡೆದಿದೆ.
ಸುಮಾರು 50 ಲಕ್ಷ ವೆಚ್ಚದಲ್ಲಿ ವಾರದ ಹಿಂದೆ ನಿರ್ಮಿಸಿದ ರಸ್ತೆ ಕಿತ್ತು ಬಂದಿದೆ. ಸುಮಾರು 28 ಮನೆಗಳನ್ನು ಹೊಂದಿರುವ ನೆರಟೂರು ಗ್ರಾಮ ಪಂಚಾಯತ್ ಹೊರಣಿ ಗ್ರಾಮದ ಜಿಗಳಗೋಡಿನಿಂದ ಕಡೆಮನೆಗೆ ಒಂದೂವರೆ ಕಿಮೀ ಉದ್ದದ ಸಂಪರ್ಕ ರಸ್ತೆ ಇದಾಗಿದೆ. 5 ಎಂಎಂ ಟಾರು ಹಾಕದ ಕಾರಣ ಕೈಯಿಂದ ಸಲೀಸಾಗಿ ಕಿತ್ತು ಬರುವಂತಿದೆ. ಟಾರು ಪ್ರಮಾಣ ಕೂಡ ಕಡಿಮೆ ಮಾಡಿದ್ದು ಅಂಟಿನ ಪ್ರಮಾಣ ಕ್ಷೀಣಿಸುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಗೃಹಸಚಿವ, ಹಾಲಿ ಶಾಸಕ ಆರಗ ಜ್ಞಾನೇಂದ್ರ 3500 ಕೋಟಿ ಅನುದಾನದಿಂದ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಅವರ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು ಅಲ್ಲಲ್ಲಿ ಅಕ್ರಮ ಕಾಮಗಾರಿಗಳು ಬಹಳಷ್ಟು ನಡೆಯುತ್ತಿವೆ. ಗುತ್ತಿಗೆದಾರರು ಮಾಡುತ್ತಿರುವ ಕಳಪೆ ಕಾಮಗಾರಿಯ ಹೊಣೆಯನ್ನು ಆರಗ ಜ್ಞಾನೇಂದ್ರ ಹೊರುವಂತಹ ಸ್ಥಿತಿ ನಿರ್ಮಾಣವಾದಂತಿದೆ.
ಕಳೆದ ಒಂದು ವಾರದ ಹಿಂದೆ ಸುಮಾರು 50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಇದೀಗ
ಒಂದು ವಾರಕ್ಕೆ ರಸ್ತೆ ಕಿತ್ತು ಬಂದಿದೆ. ಈ ಬಗ್ಗೆ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ
ವಿರುದ್ಧ ಗ್ರಾಮಸ್ಥರು ರಸ್ತೆ ಟಾರು ಕೀಳುವ ಮೂಲಕ ಹೋರಾಟಕ್ಕೆ ಮುಂದಾಗಿದ್ದಾರೆ.
ರಸ್ತೆಯಲ್ಲಿ ಅಲ್ಲಲ್ಲಿ ಹೊಂಡ ಬಿದ್ದಿದೆ. ತಕ್ಷಣ ಜಿಲ್ಲಾ ಅಧಿಕಾರಿಗಳು, ತಾಲೂಕು ಅಧಿಕಾರಿಗಳು ತನಿಖೆ ನಡೆಸಿ ಕಾಮಗಾರಿ ಸರಿಪಡಿಸಬೇಕು. ಇಲ್ಲವಾದಲ್ಲಿ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ರಸ್ತೆ ಅಕ್ಕಪಕ್ಕ ಮಣ್ಣು ಸರಿ ಹಾಕಲಿಲ್ಲ. ರಸ್ತೆ ಕಾಮಗಾರಿ ಜತೆಗೆ ರಸ್ತೆ ಅಕ್ಕಪಕ್ಕ ಹಾಕಿದ ಮಣ್ಣು ಕೂಡ ಇಡೀ ರಸ್ತೆ ಸುತ್ತ ಸರಿಯಾಗಿ ಹಾಕಿಲ್ಲ. ಮಣ್ಣು ಹೊಯ್ಯಲಾಗಿದೆ. ಇದು ಮಳೆಗಾಲದಲ್ಲಿ ಕೊಚ್ಚಿ ಹೋಗಿ ಚರಂಡಿಗೆ ಸೇರಲಿದೆ. ಇದರಿಂದ ರಸ್ತೆ ಸಂಪೂರ್ಣ ಹಾಳಾಗಲಿದೆ ಎಂದು ಗ್ರಾಮಸ್ತರು ಆರೋಪಿಸಿದ್ದಾರೆ.