ತೀರ್ಥಹಳ್ಳಿ: ‘ಬ್ರಹ್ಮಶ್ರೀ ನಾರಾಯಣಗುರು ನಿಗಮ ಮಂಡಳಿ ಸ್ಥಾಪಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಕಾರ್ಯ ಸ್ವಾಗತಾರ್ಹ. ಈಡಿಗ, ಬಿಲ್ಲವ ಸೇರಿದಂತೆ 26 ಜಾತಿಗಳ ಸಮಗ್ರ ಅಭಿವೃದ್ದಿಗೆ 500 ಕೋಟಿ ರೂಪಾಯಿ ಅನುದಾನ ಘೋಷಿಸಬೇಕು’ ಎಂದು ಗರ್ತಿಕೆರೆ ಬ್ರಹ್ಮಶ್ರೀ ನಾರಾಯಣಗುರು ಆಶ್ರಮದ ರೇಣುಕಾನಂದ ಸ್ವಾಮೀಜಿ ಆಗ್ರಹಿಸಿದರು.
ಬುಧವಾರ ಕೋಳಿಕಾಲುಗುಡ್ಡದ ಆರ್ಯ ಈಡಿಗರ ಸಮುದಾಯ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕ ಬದಲಾವಣೆಗಾಗಿ ಇಟ್ಟಿದ್ದ ಸುಮಾರು 10 ವರ್ಷಗಳ ಬೇಡಿಕೆ ಈಡೇರಿದೆ. 2ಎ ಪಂಗಡದಲ್ಲಿ ಧ್ವನಿಗೂಡಿಸುವ ದೊಡ್ಡ ಜಾತಿಗಳ ಸಂಖ್ಯೆ ಕಡಿಮೆ. ಸಣ್ಣಪುಟ್ಟ ಉಪಪಂಗಡಗಳನ್ನು ಒಟ್ಟುಗೂಡಿಸುವ ಪ್ರಯತ್ನ ಇನ್ನಷ್ಟು ಸದೃಢವಾಗಿ ಜಾರಿಗೊಳಿಸಲು ಕಾರ್ಯಯೋಜನೆ ತಯಾರಾಗುತ್ತಿದೆ. ನಿಗಮ ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು.
ರಾಜ್ಯಕ್ಕೆ ಬೆಳಕು ನೀಡಲು ಭೂಮಿ ಕಳೆದುಕೊಂಡ ಮುಳುಗಡೆ ಸಂತ್ರಸ್ತರು ಅತಂತ್ರರಾಗಿದ್ದಾರೆ. ಶರಾವತಿ ಸಂತ್ರಸ್ತರಿಗೆ ಸರ್ಕಾರ ಅನ್ಯಾಯವಾಗದಂತೆ ಎಚ್ಚರ ವಹಿಸಬೇಕು. ಸಂತ್ರಸ್ತರಿಗೆ ಭೂಮಿ ಹಂಚಲು ಪ್ರಸ್ತುತ ಸುಮಾರು 25,000 ಎಕರೆಗೂ ಹೆಚ್ಚು ಜಮೀನಿನ ಅವಶ್ಯಕತೆ ಇದೆ. ರಾಜ್ಯಪತ್ರದಲ್ಲಿ ಪ್ರಕಟಿಸಿರುವ ಡಿನೋಟಿಫಿಕೇಷನ್ ರದ್ದು ಆದೇಶದಿಂದ ಸಂತ್ರಸ್ತರು ಕಂಗಾಲಾಗಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಸದ್ಯ 9,934 ಎಕರೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.