ಸ್ವಾಮೀ.. ಲಾರಿಗೆ ದಾಖಲೆಗಳಿಲ್ಲ....
ಅರಣ್ಯ ಇಲಾಖೆ ಪಾತ್ರ ಬಹಿರಂಗಗೊಳಿಸಲಿ...
ಗೃಹಸಚಿವರ ಕ್ಷೇತ್ರದಲ್ಲಿ ಮರಳು, ಕಲ್ಲು ಇದೀಗ ನಾಟ...
ಗ್ರಾಮಸ್ಥರಿಂದ ಲಾರಿ ಬಿಡಿಸಲು ಅರಣ್ಯ ಇಲಾಖೆ ಕಸರತ್ತು ನಡೆಸುತ್ತಿದೆ. ಪ್ರಕರಣ ಮುಚ್ಚುವ ಹುನ್ನಾರವನ್ನು ಗ್ರಾಮಸ್ಥರು ನಿರಾಕರಿಸುತ್ತಿದ್ದು ಬೆಳಗ್ಗೆ ಆಗಿರುವ ಅನಾಹುತ ಇತ್ಯರ್ಥಕ್ಕೆ ಪಟ್ಟು ಹಿಡಿದಿದ್ದಾರೆ. ವಿದ್ಯುತ್ ಉಪಕರಣಗಳನ್ನು ದುರಸ್ಥಿ ಮಾಡಿಸಿಕೊಡದಿದ್ದರೆ ಅರಣ್ಯ ಇಲಾಖೆಗೂ ಬಿಡುವುದಿಲ್ಲ. ವಿದ್ಯುತ್ ಕಂಬ, ಟಿವಿ, ಫ್ರಿಡ್ಜ್, ಅಡಿಕೆ ಸುಲಿಯುವ ಯಂತ್ರ ಮುಂತಾದವುಗಳ ದುರಸ್ಥಿ ಆಗಲೇಬೇಕು. ಅರಣ್ಯ ಇಲಾಖೆ ತನ್ನ ತಪ್ಪುಗಳನ್ನು ಮುಚ್ಚುವ ಪ್ರಯತ್ನ ಮಾಡಿದರೆ ಸಹಿಸುವುದಿಲ್ಲ ಎಂಬ ಕೂಗು ಕೇಳಿಬಂದಿದೆ.
ತೀರ್ಥಹಳ್ಳಿ ತಾಲ್ಲೂಕಿನ ಬೆಗುವಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 169 ರ ಮಾರ್ಗ ಮಧ್ಯೆ ನಾಟ ತುಂಬಿದ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಲಾರಿ ಮತ್ತು ಮರಗಳಿಗೆ ದಾಖಲೆ ಇಲ್ಲದಿರುವುದು ಗ್ರಾಮಸ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಅಪಘಾತವಾಗಿ ಗಂಟೆಗಳು ಕಳೆದರು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸದಿರುವುದು ಹಲವು ಅನುಮಾನ ಸೃಷ್ಟಿಸಿದೆ. ಲಾರಿ ಚಾಲಕ ಕೂಡ ಮಾಹಿತಿ ನೀಡದಿರುವುದು ಇನ್ನಷ್ಟು ಗೊಂದಲ ಆವರಿಸಿದೆ. ರಾತ್ರೋ ರಾತ್ರೋ ಕಳ್ಳ ಸಾಗಾಟ ದಂಧೆ ಆರಂಭವಾಗಿದ್ದು ಗಂಧ ಕಳ್ಳತನದ ಜಾಡು ಬೆಳೆದಂತೆ ಬೃಹತ್ ಗಾತ್ರದ ಬೆಲೆ ಬಾಳುವ ನಾಟಗಳು ಮಲೆನಾಡು ಭಾಗದಿಂದ ಜಿಲ್ಲೆ ಸಲೀಸಾಗಿ ದಾಟುತ್ತಿದೆ.
ಚಿಕ್ಕ ಪುಟ್ಟ ವಿಚಾರಗಳಿಗೆ ರೈತರು, ಸಾಮಾನ್ಯರಿಗೆ ಚಿತ್ರ ಹಿಂಸೆ ನೀಡುವ ಅರಣ್ಯ ಇಲಾಖೆ ಕಳ್ಳನಾಟ ಸಾಗಾಣಿಕೆ ದಂಧೆಗೆ ಫುಲ್ ಸಪೋರ್ಟ್ ಆಗಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಹೆದ್ದಾರಿ ಭಾಗಗಳಲ್ಲಿ ಬ್ಯಾರಿಕೇಡ್ ಅಳವಡಿಸುತ್ತಿದ್ದರು ಚೆಕ್ ಪೋಸ್ಟ್ ದಾಟಿ ಹೊರ ಜಿಲ್ಲೆಗಳಿಗೆ ಸಲೀಸಾಗಿ ಸಾಗುತ್ತಿವೆ. ಲಾರಿಗಳಿಗೂ ದಾಖಲೆಗಳಿಲ್ಲದೇ ಇರುವುದು ಇನ್ನೊಂದು ಬಗೆಯ ಅನುಮಾನ ಸೃಷ್ಟಿಸಿದ್ದು ಆರ್ ಟಿಓ ಅಧಿಕಾರಿಗಳು ಕೆಲಸ ಮಾಡದಿರುವುದನ್ನು ಸೂಚಿಸುವಂತಿದೆ. ಪೊಲೀಸ್ ಇಲಾಖೆಯೂ ಬಂದೋಬಸ್ತ್ ಮಾಡುತ್ತಿದ್ದರು ಇಂತಹ ಕರಾಳ ದಂಧೆಗೆ ಪೂರ್ಣ ಪ್ರಮಾಣದಲ್ಲಿ ಸಾಥ್ ನೀಡುತ್ತಿದ್ದಾರೆ ಎಂದು ಗ್ರಾಮಸ್ತರು ದೂರುತ್ತಿದ್ದಾರೆ.
ಗೃಹಸಚಿವ ಆರಗ ಜ್ಞಾನೇಂದ್ರರ ಸ್ವಕ್ಷೇತ್ರದಲ್ಲಿ ಅಧಿಕಾರಿ ವರ್ಗ ಪೂರ್ಣ ಪ್ರಮಾಣದಲ್ಲಿ ಆಡಳಿತ ವಿರೋಧಿ ಧೋರಣೆ ತಳೆದಂತಿದೆ. ಒಂದೊಂದು ದಂಧೆಗಳ ಕರಾಳ ಮುಖಗಳು ಎಳೆಎಳೆಯಾಗಿ ಬೀದಿಗೆ ಬರುತ್ತಿವೆ. ಮರಳು, ಕಲ್ಲು ದಂಧೆಗಳು ಎಗ್ಗಿಲ್ಲದೆ ಸಾಗುತ್ತಿರುವ ಮಧ್ಯೆ ಮರಗಳ್ಳ ಸಾಗಾಟವೂ ಅನಿಯಮಿತವಾಗಿ, ಅರಣ್ಯ ಇಲಾಖೆ ಸೀಲ್ ಇಲ್ಲದೆ ಮಹಾನಗರಗಳಿಗೆ ಸಾಗುತ್ತಿವೆ. ಗೃಹಸಚಿವರು ಇಂತಹ ದಂಧೆಗಳಿಗೆ ಬ್ರೇಕ್ ಹಾಕದಿದ್ದರೆ ಸಾರ್ವಜನಿಕರಿಂದ ತೀವ್ರ ವಿರೋಧ ಎದುರಿಸುವ ಸನ್ನಿವೇಶ ಎದುರಾಗಬಹುದು.