ಜನ ಸೇರಿಸಲು ಅಧಿಕಾರಿ ಮೊರೆ
ನಂದಿತಾ ಸಾವಿಗೆ ಈಗಲಾದರು ನ್ಯಾಯ ಕೊಡಿ
ಬೊಮ್ಮಾಯಿ ಬಗ್ಗೆ ಗೌರವ ಇದೆ
ಗೃಹಸಚಿವ ಆರಗ ಜ್ಞಾನೇಂದ್ರ ಯಾವ ಅಭಿವೃದ್ದಿ ಮಾಡಿದ್ದಾರೋ ಯಾರಿಗೂ ಗೊತ್ತಾಗುತ್ತಿಲ್ಲ. ನೂತನ
ಪಟ್ಟಣ ಪಂಚಾಯಿತಿ ಕಟ್ಟಡ ಸೇರಿದಂತೆ ಬಹುತೇಕ ಕಾಮಗಾರಿಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದವು.
ಅವುಗಳನ್ನು ಈಗ ಪೂರ್ಣಗೊಳಿಸಲಾಗುತ್ತಿದೆ. ಅಡಿಕೆ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾಗಿಯೂ ಇಲ್ಲಿನ
ಅಡಿಕೆ ಬೆಳೆಗಾರರ ಸಮಸ್ಯೆಗೆ ಅವರ ಕೊಡುಗೆ ಶೂನ್ಯ. ಈಗ ಎಲೆಚುಕ್ಕಿ ರೋಗದಿಂದ ಅಡಿಕೆ ಬೆಳೆಯೇ ನಾಶವಾಗುವ
ಭೀತಿ ಎದುರಾಗಿದೆ. ಇದಕ್ಕೆ ಇಲ್ಲಿಯವರಗೆ ಕೇವಲ 36 ಲಕ್ಷ ಮಾತ್ರ ಪರಿಹಾರ ಬಂದಿರುವ ಮಾಹಿತಿ ಇದೆ.
ಆದರೆ ಜ್ಞಾನೇಂದ್ರ ಕೋಟಿಗಟ್ಟಲೆ ಹಣ ಬಿಡುಗಡೆಯಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇದೆಲ್ಲ ಕಾರಣದಿಂದಲೇ
ಭಾನುವಾರದ ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಜನ ಬರಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಸಭಾಂಗಣ
ಭರ್ತಿ ಮಾಡುವ ಹೊಣೆಯನ್ನು ಬಡಪಾಯಿ ಅಧಿಕಾರಿಗಳ ಮೇಲೆ ಹೊರಿಸಲಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್
ಲೇವಡಿ ಮಾಡಿದ್ದಾರೆ.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬೊಮ್ಮಾಯಿ
ಕುರಿತು ನನಗೆ ವೈಯಕ್ತಿವಾಗಿ ಗೌರವವಿದೆ. ಕಾರಣ ಅವರು ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದಾಗ ತುಂಗಾ
ಮೇಲ್ದಂಡೆ ಯೋಜನೆಯಡಿ ಅನೇಕ ಯೋಜನೆಗಳನ್ನು ಮಂಜೂರು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಸಂದರ್ಭದಲ್ಲಿ
ಸಂಸದ ಬಿ.ವೈ. ರಾಘವೇಂದ್ರ, ಸಿಎಂ ಆಗಿದ್ದ ಯಡಿಯೂರಪ್ಪ ಕೂಡ ಸಹಕರಿಸಿದ್ದರು. ಹಾಗಾಗಿ ನಾನು ಈ ಸಂದರ್ಭದಲ್ಲಿ
ರೂಪಿಸಿದ್ದ ಹೋರಾಟ ಮಾಡಿದರೆ ಗಣ್ಯರಿಗೆ ಅಗೌರವ ಸೂಚಿಸಿದಂತೆ ಆಗುವುದರಿಂದ ಆರಗ ಜ್ಞಾನೇಂದ್ರ ವಿರುದ್ಧ
ಪ್ರತ್ಯೇಕ ಹೋರಾಟ ಮಾಡುತ್ತೇನೆ ಎಂದರು.
25 ವರ್ಷಗಳ ಹಿಂದೆ ರವೀಂದ್ರ ಶೆಟ್ಟರ ಕಾಲದ ನಿವೇಶನ ಹಂಚಿಕೆ ಸಿಐಡಿ ತನಿಖೆ ನಡೆಸಲು ಆರಗ ಮುಂದಾಗಿದ್ದಾರೆ.
ಗೃಹಸಚಿವ ಸ್ಥಾನದಲ್ಲಿದ್ದರು 5 ವರ್ಷಗಳ ಹಿಂದಿನ ನಂದಿತಾ ಪ್ರಕರಣ ಯಾಕೆ ಪುನಃ ತನಿಖೆ ನಡೆಸುತ್ತಿಲ್ಲ.
ಆಗ ನಂದಿತಾ ಮನೆಗೆ ಭೇಟಿ ನೀಡಿದ ಅಮಿತ್ ಶಾ ಈಗ ಕೇಂದ್ರ ಗೃಹಸಚಿವ. ಆರಗ ಜ್ಞಾನೇಂದ್ರ ರಾಜ್ಯ ಗೃಹಸಚಿವ
ತನಿಖೆಗೆ ಯಾರ ಅಡ್ಡಿ ಇದೆ? ತನಿಖೆ ನಡೆದರೆ ಆರಗ ವಿರುದ್ಧ ಸಾಕ್ಷಿ ನಾಶ, ಕ್ರಿಮಿನಲ್ ಪ್ರಕರಣ ದಾಖಲಾಗುತ್ತದೆ.
ಸಿಎಂ ಕಾರ್ಯಕ್ರಮಕ್ಕೆ ಜನ ಸೇರಿಸಲು ಅಧಿಕಾರಿಗಳ ಬಳಕೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ರಾಜ್ಯ ಸರ್ಕಾರದ ಡಿನೋಟಿಫಿಕೇಷನ್ ಮೂಲಕ 56 ಅಧಿಸೂಚನೆ ರದ್ದಾಗಿದ್ದು ಬಹುತೇಕ ಶರಾವತಿ ಸಂತ್ರಸ್ತರು
ಬೀದಿಗೆ ಬೀಳಲಿದ್ದಾರೆ. ಜ್ಞಾನೇಂದ್ರ ಮಂಜೂರು ಮಾಡಿಸಿದ್ದ ಮುಳುಗಡೆ ಸಂತ್ರಸ್ತರ ಭೂಮಿಯೂ ಇದರಲ್ಲಿದೆ.
ಅವರು ಅಧಿಕಾರದಲ್ಲಿ ಇರುವುದರಿಂದ ಸ್ವಪಕ್ಷದ ವಿರುದ್ಧ ಧ್ವನಿ ಹೊರಡಿಸಲು ಅವರಿಗೆ ಆಗುತ್ತಿಲ್ಲ. ವಿಶೇಷವಾಗಿ
ಇದರಲ್ಲಿ ಜಿಲ್ಲೆಯ ಪ್ರಮುಖ ರಾಜಕಾರಣಿಗಳ ಜಮೀನು ಕೈಬಿಡಲಾಗಿದೆ ಎಂದು ದೂರಿದರು.
ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ ಹಾಗೂ ಮಲೆನಾಡಿನ ವಿವಿಧ ಸಮಸ್ಯೆಗಳನ್ನು
ಪರಿಹರಿಸಲು ಒತ್ತಾಯಿಸಿ ನವೆಂಬರ್ 28 ರಂದು ಶಿವಮೊಗ್ಗದಲ್ಲಿ ಪಾದಯಾತ್ರೆ ಬೃಹತ್ ಸಮಾವೇಶ ನಡೆಯಲಿದೆ.
ಸಮಾವೇಶಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿಎಲ್ಪಿ ನಾಯಕ ಸಿದ್ದರಾಮಯ್ಯ, ರಾಜ್ಯ
ಉಸ್ತುವಾರಿ ರಾಜದೀಪ್ ಸಿಂಗ್ ಸುರ್ಜೇವಾಲ, ವಿದಾನಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್
ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕೆಪಿಸಿಸಿ ಸದಸ್ಯ ನಾರಾಯಣ ರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು
ಮಂಜುನಾಥ, ಗ್ರಾಮಾಂತರ ಅಧ್ಯಕ್ಷ ಮುಡುಬ ರಾಘವೇಂದ್ರ, ತಾಲ್ಲೂಕು ವಕ್ತಾರ ವಿಶ್ವನಾಥ ಶೆಟ್ಟಿ, ಯುವ
ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ, ಮುಖಂಡ ಕಡ್ತೂರು ದಿನೇಶ್ ಇದ್ದರು.