ಸರ್ಕಾರಿ ಡಿಗ್ರಿ ಕಾಲೇಜು ಸುತ್ತ 250ಕ್ಕೂ ಹೆಚ್ಚು ಲೋಡ್ ಅಕ್ರಮ ಮರಳು
ಕಣ್ಣುಮುಚ್ಚಿ ಕುಳಿತ ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ಅಮ್ರಪಾಲಿ ಸುರೇಶ್ ಆಕ್ರೋಶ
ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ 250ಕ್ಕೂ ಹೆಚ್ಚು ಮರಳು ಅನಧಿಕೃತವಾಗಿ ಸ್ಟಾಕ್ ಮಾಡಿದ್ದರೂ ತೀರ್ಥಹಳ್ಳಿಯ ತಹಶಿಲ್ದಾರ್ , ಪೋಲಿಸ್ ಇಲಾಖೆ, ಗಣಿ ಇಲಾಖೆ ಎಲ್ಲವೂ ಕಣ್ಣು ಮುಚ್ಚಿ ಕುಳಿತಿರುವುದರ ಹಿಂದಿನ ಕಾರಣವೇನು ಎಂಬುದು ತಿಳಿಯಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಮ್ರಪಾಲಿ ಸುರೇಶ್ ಆರೋಪಿಸಿದ್ದಾರೆ.
ಇನ್ನೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡದ ಆಜುಬಾಜು ಸ್ಮಶಾನದ ಜಾಗವಿದ್ದು ಅದನ್ನು ಈ ಹಿಂದೆಯೆ ಕಾಲೇಜಿಗಾಗಿ ಬಳಸಲಾಗಿದೆ. ಆದರೆ ಈ ಹಿಂದೆ ಸ್ಮಶಾನದ ಜಾಗದಲ್ಲಿದ್ದ ನೂರಾರು ಲೊಡ್ ಸೈಜ್ ಅನ್ನು ಹರಾಜು ಹಾಕದೇ ಖಾಸಗಿ ಕಾಂಟ್ರಾಕ್ಟರ್ ಒಬ್ಬರು ತಮ್ಮ ಸ್ವಂತ ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದರ ಹಿಂದೆ ಯಾವ ಇಲಾಖೆ ಕಣ್ಣಿಗೆ ಪಟ್ಟಿ ಕಟ್ಟಿದ್ದರಿಂದ ಸಾಧ್ಯವಾಗಿದೆ. ಗೃಹ ಇಲಾಖೆಯ ಉಸ್ತುವಾರಿಗಳೇ ತಿಳಿಸಬೇಕಿದೆ.
ತೀರ್ಥಹಳ್ಳಿಯಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಹಣ ತಕ್ಷಣಕ್ಕೆ ಬಿಲ್ ಆಗುವ ಕಾಮಗಾರಿಗಳೆಲ್ಲಾ ಏಸಿಸಿ ಫ್ಯಾಕ್ಟರಿಗೆ, ಹಣ ಇಲ್ಲದ ತಡ, ಲಾಭಕ್ಕಿಂತ ನಷ್ಟವೇ ಹೆಚ್ಚಿರುವ ಕಾಮಗಾರಿಗಳನ್ನೆಲ್ಲಾ ಇತರೆ ಕಂಟ್ರಾಕ್ಟರ್ ಗಳಿಗೆ ನೀಡಿ ಅದರಲ್ಲೂ ಐವತ್ತು ಪರ್ಸೆಂಟ್ ಕಮಿಷನ್ ದಂಧೆ ನಡೆಯುತ್ತಿರುವುದು ಕಂಟ್ರಾಕ್ಟರ್ ಮನೆ ಮಠ ಮಾರಿಕೊಳ್ಳುವಂತೆ ಮಾಡುತ್ತಿರುವುದರಿಂದ ಗೃಹಮಂತ್ರಿಗಳು ಅದ್ಯಾವ ಸೀಮೆ ಅಭಿವೃದ್ದಿಯಾಗುತ್ತಿದ್ದಾರೊ ದೇವರೇ ಬಲ್ಲ.
ತೀರ್ಥಹಳ್ಳಿಯಲ್ಲಿ ನಡೆದ ನಾಗರೀಕ ಸನ್ಮಾನದಲ್ಲಿ ನನಗೆ ಬೆಂಗಳೂರಿನಲ್ಲಿ ಯಾವುದೇ ಸೈಟ್ ಆಗಲಿ ಮನೆಯಾಗಲಿ ಇಲ್ಲಾ ಎಂದಿದ್ದ ಗೃಹಸಚಿವರು ಹೆಚ್.ಎಸ್. ಆರ್. ಲೇಔಟ್ ನಲ್ಲಿ ಕೋಟಿಯ ಸೈಟು ಸಾಲದು ಪ್ರತಿಷ್ಟಿತ ಡಾಲರ್ಸ್ ಕಾಲೋನಿಯ ಐವತ್ತು ಕೋಟಿಯ ಸೈಟ್ ಬೇಕು ಎಂದು ಅರ್ಜಿ ಹಾಕಿಸಿದ್ದು ಈಗ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗಿತ್ತಲ್ಲವೇ? ಅದರ ಬಗ್ಗೆ ಈಗಾಗಲೇ ಲೋಕಾಯುಕ್ತ ತನಿಖೆಯು ಆರಂಭವಾಗಿರುವುದು, ಇಬ್ಬರು ಬಿಡಿಎ ಅಧಿಕಾರಿಗಳು ಅಮಾನತ್ತಾಗಿರುವುದು ಸತ್ಯವಲ್ಲವೇ? ತನಿಖೆ ಸರಿಯಾಗಿ ನಡೆದರೆ ಗೃಹಮಂತ್ರಿಗಳ ಭ್ರಷ್ಟಾಚಾರ ಬಯಲಿಗೆ ಬರಲು ಹೆಚ್ಚು ದಿನ ಉಳಿದಿಲ್ಲಾ ಎನ್ನುವುದರ ಸೂಚ್ಯವೇ?
ಮೊನ್ನೆ ಮೊನ್ನೆ ಐದು ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಬೆಳ್ಳಿ ನಾಣ್ಯ ಹಂಚಿದ ತೀರ್ಥಹಳ್ಳಿಗೆ ಸೀಮಿತ ಗೃಹಮಂತ್ರಿಗಳು ಈಗಾಗಲೇ ಕ್ಷೇತ್ರದಾದ್ಯಂತ ಐವತ್ತು ಸಾವಿರಕ್ಕೂ ಹೆಚ್ಚು ಬೆಳ್ಳಿ ನಾಣ್ಯ ಹಂಚುತ್ತಿದ್ದಾರೆ ಎಂಬ ಸುದ್ದಿ ಹಬ್ಬುತ್ತಿದೆ ಇದಕ್ಕೆಲ್ಲಾ ಗುಮ್ಮಿಬಾವಿಯಲ್ಲಿ ಪ್ರತಿ ತಿಂಗಳು ಆರು ಕೋಟಿಯ ನಿಧಿ ಸಿಗುತ್ತಿರುವುದು ಕಾರಣವೇ ತಿಳಿಸಬೇಕಿದೆ...
ಇಂದಿರಾನಗರದ ರಸ್ತೆಗೆ ಹೋದವರ್ಷ ನಲವತ್ತು ಲಕ್ಷದಲ್ಲಿ ಎಸಿಸಿ ಫ್ಯಾಕ್ಟರಿ ಕಾಮಗಾರಿ ನಡೆಸಿದ್ದು , ಕಳಪೆ ಕಾಮಗಾರಿಯ ಬಗ್ಗೆ ಬೆಳಕು ಚೆಲ್ಲಿದ ಮೇಲೆ ಅವರಿಂದ ಹೊಸ ರಸ್ತೆ ಮಾಡಿಸುವುದು ಬಿಟ್ಟು ಈಗ ಮತ್ತೆ ನಲವತ್ತು ಲಕ್ಷ ಹಣ ಬಿಡುಗಡೆ ಮಾಡಿರುವುದು ಎಸಿಸಿಯ ತಿಜೋರಿ ತುಂಬಲು ಹೊರತು ತೀರ್ಥಹಳ್ಳಿ ಕ್ಷೇತ್ರದ ಉದ್ದಾರಕ್ಕಲ್ಲಾ ಎಂಬುದು ಈಗ ಜಗಜ್ಜಾಹಿರಾಗಿದೆ ಎಂದು ಅಮ್ರಪಾಲಿ ಸುರೇಶ್ ಹೇಳಿಕೆಯಲ್ಲಿ ನೀಡಿದ್ದಾರೆ.