ಕುಂಟೇಹಳ್ಳ-ಬೈಲುಬಡಿಗೆ ಸೇತುವೆ ನಿರ್ಮಾಣಕ್ಕೆ ಆಗ್ರಹ

ಸೇತುವೆ ನಿರ್ಮಾಣ ವಿಳಂಬ - ಚುನಾವಣೆ ಬಹಿಷ್ಕಾರ
ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ

ಸೇತುವೆ ಕುಸಿದು ವಾಹನ ಸ್ಥಗಿತಗೊಂಡು 4 ವರ್ಷ ಕಳೆದರು ಹೊಸಸೇತುವೆ ನಿರ್ಮಾಣವಾಗಿಲ್ಲ. ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಆಗಿದ್ದು ಟೆಂಡರ್‌ ಕರೆಯಲಾಗಿದೆ ಎಂಬ ಉತ್ತರ ಆಡಳಿತದಿಂದ ಸಿಗುತ್ತಿದೆ. ಸೇತುವೆ ನಿರ್ಮಾಣ ವಿಳಂಬವಾದರೆ ಚುನಾವಣೆ ಬಹಿಷ್ಕರಿಸಲಾಗುತ್ತದೆ. ಶಿವಮೊಗ್ಗ -ತೀರ್ಥಹಳ್ಳಿ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ ಹಮ್ಮಿಕೊಳ್ಳಲಾಗುತ್ತದೆ ಎಂದು ಬೈಲುಬಡಿಗೆ – ಹಿರೇಬೈಲು ಗ್ರಾಮಸ್ಥರು  ಶುಕ್ರವಾರ ಬೆಜ್ಜವಳ್ಳಿ ನಾಡಕಚೇರಿ  ಪ್ರತಿಭಟನೆ ನಡೆಸಿ ಎಚ್ಚರಿಸಿದರು.


ಬೈಲುಬಡಿಗೆಹಿರೇಬೈಲು ಸೇರಿದಂತೆ ಅನೇಕ ಗ್ರಾಮಗಳ ಜನರಿಗೆ ಕುಸಿದ ಸೇತುವೆ ಮಾರ್ಗ ಅತೀ ಹತ್ತಿರವಾಗಿದೆ. ಸೇತುವೆ ಇಲ್ಲದ ಕಾರಣ ಸುಮಾರು
15 ಕಿ.ಮೀ. ದೂರದಿಂದ ಕ್ರಮಿಸಿ ಪ್ರಮುಖ ಮಾರ್ಗ ಸಂಪರ್ಕಿಸಬೇಕಿದೆ. ಗ್ರಾಮದಲ್ಲಿ ಕೂಲಿ ಕಾರ್ಮಿಕರು, ಪರಿಶಿಷ್ಟ ಪಂಗಡ, ವರ್ಗದ ಕುಟುಂಬದವರ ವಾಸ ಹೆಚ್ಚಾಗಿದ್ದು ಸೇತುವೆ ಇಲ್ಲದೆ ಸಂಚಾರಕ್ಕೆ ತುಂಬಾ ತೊಂದರೆ ಆಗಿದೆ. ಜನರ ಬೇಡಿಕೆಯನ್ನು ಆಡಳಿತ ಹಗುರವಾಗಿ ಪರಿಗಣಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಬೆಜ್ಜವಳ್ಳಿ ಗ್ರಾ.ಪಂ. ಸದಸ್ಯ ಮೇಲಿನಕೊಪ್ಪ ಹರೀಶ್‌ ಹೇಳಿದರು.

ಹಿಂದೆ ಸಚಿವರಾಗಿದ್ದ ಈಶ್ವರಪ್ಪ, ಸಂಸತ್‌ ಸದಸ್ಯ ಬಿ.ವೈ. ರಾಘವೇಂದ್ರ, ಸಚಿವ ಆರಗ ಜ್ಞಾನೇಂದ್ರ 4 ವರ್ಷದ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಹೊಸ ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು 2 ವರ್ಷದಿಂದ ಸುಳ್ಳು ಹೇಳಲಾಗುತ್ತಿದೆ. ಸೇತುವೆ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ ಎಂದು 1 ವರ್ಷದಿಂದ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಉತ್ತರಿಸುತ್ತಿದ್ದಾರೆ. 3 ತಿಂಗಳ ಒಳಗೆ ಸೇತುವೆ ಕಾಮಗಾರಿ ಆರಂಭವಾಗದಿದ್ದರೇ ಜನಪ್ರತಿನಿಧಿ, ಅಧಿಕಾರಿಗಳಿಗೆ ಘೇರಾವ್‌ ಹಾಕಲಾಗುತ್ತದೆ ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ನೂರಾರು ಗ್ರಾಮಸ್ಥರು ಸೇರಿ ತಹಶೀಲ್ದಾರ್‌, ಇತರೆ ಅಧಿಕಾರಿಗಳ ಬಳಿ ಅಹವಾಲು ಮಂಡಿಸಿದರು. ಈ ಸಂದರ್ಭದಲ್ಲಿ ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಾಳೂರು ಉಮೇಶ್‌, ಗಬಡಿ ಉದಯ್‌, ತೂದೂರು ಗ್ರಾ.ಪಂ. ಸದಸ್ಯರಾದ ಶರತ್‌, ರಕ್ಷಿತಾ ಗ್ರಾಮಸ್ಥರಾದ ಸುಬ್ರಹ್ಮಣ್ಯ, ಹಿರೇಬೈಲು ಸತ್ಯಪ್ಪ, ಸುರೇಶ್‌ ಬೈಲುಬಡಿಗೆ ಸೇರಿದಂತೆ ಅನೇಕರು ಇದ್ದರು. ತಹಶೀಲ್ದಾರ್‌ ಅಮೃತ್‌ ಅತ್ರೇಶ್‌ ಮನವಿ ಸ್ವೀಕರಿಸಿದರು.







ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post