ಸೇವಾ ವಲಯ ಮುಚ್ಚಲು ಹುನ್ನಾರ
ಗೃಹಸಚಿವರ ಮಗನನ್ನು ಸೈನ್ಯಕ್ಕೆ ಸೇರಿಸಲಿ…?
ಐವೈಸಿ ವಕ್ತಾರ ಆದರ್ಶ ಹುಂಚದಕಟ್ಟೆ
ಪಠ್ಯ ಪರಿಷ್ಕರಣೆ ನೆಪದಲ್ಲಿ ಮುಗ್ದ ಮಕ್ಕಳಿಗೆ ಸುಳ್ಳು ಇತಿಹಾಸ ಹೇಳಿಕೊಡುವ
ಪ್ರಯತ್ನಗಳು ನಡೆದಿವೆ. ಬಾಲ್ಯದಿಂದಲೇ ಮಕ್ಕಳಿಗೆ ಇತಿಹಾಸದಿಂದ ದೂರ ಇಡುವ ಪ್ರಯತ್ನ ನಡೆಸಿದ್ದಾರೆ.
ಸಮ ಸಮಾಜದ ಕಲ್ಪನೆಯಲ್ಲಿದ್ದ ಭಾರತವನ್ನು ಮೌಢ್ಯದ ಕಡೆಗೆ ಕೊಂಡೊಯ್ಯುತ್ತಿದ್ದಾರೆ ಎಂದು ತೀರ್ಥಹಳ್ಳಿ
ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಯುವ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಟಿ
ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದಕಟ್ಟೆ ಆರೋಪಿಸಿದರು.
ಹಿಂದೆ ಇದ್ದ ದೇಶಪಥ್, ದೇಶ್ವೀರ್ ಯೋಜನೆಯನ್ನು ತಿರುಚಿ 20 ವರ್ಷದ ಬದಲಿಗೆ ಅಗ್ನಿಪಥ ಯೋಜನೆಯಡಿ 4 ವರ್ಷದ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ. 8ನೇ ತರಗತಿ ಪಾಸ್ ಆಗಿರುವ ವಿದ್ಯಾರ್ಥಿಗಳನ್ನು ದೇಶ ರಕ್ಷಣೆ ಹೆಸರಿನಲ್ಲಿ ಭವಿಷ್ಯ ನಾಶ ಮಾಡುವ ಹುನ್ನಾರ. 23ನೇ ವಯಸ್ಸಿನಲ್ಲಿ ಸೇವೆಯಿಂದ ಹಿಂತಿರುಗಿದಾಗ ಆತನ ಜವಾಬ್ದಾರಿ ಯಾರದ್ದು ಎಂದು ಪ್ರಶ್ನಿಸಿದರು.
ಗೃಹಸಚಿವ ಆರಗ ಜ್ಞಾನೇಂದ್ರರಿಗೆ ಅಗ್ನಿಪಥ ಯೋಜನೆಯ ಮಾಹಿತಿ ಇಲ್ಲ. ಇಲಾಖೆಯಿಂದ
ಅಗ್ನಿವೀರರಿಗೆ ಉದ್ಯೋಗ ನೀಡುತ್ತೇವೆ ಎಂದು ಬಾಯಿ ಮಾತಿನ ಹೇಳಿಕೆ ನೀಡುತ್ತಿದ್ದಾರೆ. ಅದೇಶಿಸಲು ಅವರಿಗೆ
ಸಾಧ್ಯವಾಗುವುದಿಲ್ಲ. ಬಡವರ ಮಕ್ಕಳು ಸೈನ್ಯಕ್ಕೆ ಸೇರಿಸುವುದಾದರೆ ಶ್ರೀಮಂತರ ಮಕ್ಕಳಿಗೆ ಯಾಕಿಲ್ಲ.
ಇವರಿಗೆ ಸಮ ಸಮಾಜದ ಕಲ್ಪನೆ ಇಲ್ಲದಿರುವುದರಿಂದ ಇಲ್ಲ ಸಲ್ಲದ ಹೇಳಿಕೆ ನೀಡುತ್ತಾರೆ ಎಂದು ಟೀಕಿಸಿದರು.
ಪಠ್ಯ ಪರಿಷ್ಕರಣೆಯಲ್ಲಿ ಮಹಾನ್ ವ್ಯಕ್ತಿಗಳ ಗೌರವವನ್ನು ತೇಜೋವಧೆ ಮಾಡಿದ್ದು, ಇದೀಗ ಹಿಂದುಳಿದ ಸಮೂದಾಯ ಉನ್ನತಿಗೆ ಸ್ಥಾಪಿಸಿದ ಸೇವಾ ಕ್ಷೇತ್ರದ ಉದ್ದಿಮೆ ಸ್ಥಗಿತಗೊಳಿಸಲು ಸಂಚು ನಡೆದಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆಯಿಂದ ಯುವ ಜನರು ಬಳಲುತ್ತಿದ್ದಾರೆ. ಇದರ ಮಧ್ಯೆ ರಾಜ್ಯ ಬಿಜೆಪಿ ಸರ್ಕಾರ ಮಹತ್ವಕಾಂಕ್ಷಿ ಹಿಂದುಳಿದ ವರ್ಗಗಳ ನಿಗಮಗಳನ್ನು ಮುಚ್ಚುವ ಹುನ್ನಾರ ನಡೆಸಿದೆ. ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ, ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ ಹಾಗೂ ಸಾರ್ವಜನಿಕ ಉದ್ದಿಮೆ ರದ್ದು ಪಡಿಸಲು ಹಾಗೂ ಬೇರೆ ಇಲಾಖೆಗೆ ವರ್ಗಾಯಿಸಲು ಅಧಿಕೃತ ಅದೇಶಿಸಲಾಗಿದೆ ಎಂದರು.
ಯುವ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಅಮರನಾಥ ಶೆಟ್ಟಿ ಮಾತನಾಡಿ, ಕೊರೊನಾ
ನಂತರ ದೇಶದಲ್ಲಿ ಆರ್ಥಿಕ, ಶೈಕ್ಷಣಿಕ ಅಸಮಾನತೆ ಸೃಷ್ಟಿಯಾಗಿದೆ. ಇವುಗಳನ್ನು ಬಗೆಹರಿಸುವ ಬದಲು ಜನಸಾಮನ್ಯರ
ದಿಕ್ಕು ತಪ್ಪಿಸುವ ಉದ್ದೇಶದಿಂದ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ. ಅದರ ಮೇಲೆ ರಾಜಕಾರಣ ಮಾಡುತ್ತಿದ್ದಾರೆ.
ಅಭಿವೃದ್ದಿ ಕೆಲಸ ಮಾಡದೇ ಕೋಮು ಸಂಘರ್ಷ ಮುಂದಿಟ್ಟು ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ
ನಡೆಯುತ್ತಿದೆ. 8ನೇ ತರಗತಿ ಉತ್ತೀರ್ಣರಾದ ಯುವಕರನ್ನು ಅಗ್ನಿವೀರರಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
23ನೇ ವಯಸ್ಸಿನಲ್ಲಿ ಸೈನ್ಯದಿಂದ ಮರಳಿದರೆ ಆತನಿಗೆ ಸರಿಯಾದ ಸೌಲಭ್ಯ, ಭತ್ಯೆ ಸಿಗುವುದಿಲ್ಲ. ಅಗ್ನಿವೀರರಿಗೆ
ಪಿಂಚಣಿ ಸೌಲಭ್ಯ, ಆರೋಗ್ಯ ವಿಮೆ, ಸೇವಾ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಯುವ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಪುಟ್ಟೋಡ್ಲು ರಾಘವೇಂದ್ರ, ಪಟ್ಟಣ ಅಧ್ಯಕ್ಷ ಪ್ರಶಾಂತ್ ಸಾಲಿಯಾನ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಕೆಳಕೆರೆ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸುಭಾಷ್ ಕುಲಾಲ್ ಇದ್ದರು.
.jpeg)

