ಗ್ರಾಮೀಣ ಭಾಗದಲ್ಲಿ ವಿದ್ಯುತೀಕರಣ
ಬೆಜ್ಜವಳ್ಳಿ 110/11 ಕೆವಿ ಉಪಸ್ಥಾವರ ಉದ್ಘಾಟನೆ
ಜ್ಞಾನೇಂದ್ರ ಮುಖ್ಯಮಂತ್ರಿಯಾಗಲಿ...
ವೋಲ್ಟೇಜ್ ಕಾಯುವ ದಿನ ದೂರ...!
ಬೆತ್ತಲೆ ನಿಂತವರಿಗೆ ಚಡ್ಡಿ ತೊಡಿಸಿದರೆ ಸಂಕಟ
ಕಾರ್ಯಕ್ರಮದಲ್ಲಿ ನಾಡಗೀತೆಯನ್ನು ಶಾಲಾ ವಿದ್ಯಾರ್ಥಿಗಳು ಹೇಳುತ್ತಿದ್ದರು. ವೇದಿಕೆಯಲ್ಲಿದ್ದ ಕೆಪಿಟಿಸಿಎಲ್ ಅಧೀಕ್ಷಕ ಇಂಜಿನಿಯರ್ ವೆಂಕಟೇಶ್ ಪ್ರಸಾದ್ ಸ್ವಾಗತ ಮಾಡುವ ಗಲಿಬಿಲಿಯಲ್ಲಿದ್ರು. ವೇದಿಕೆಯಲ್ಲಿದ್ದ ಅತಿಥಿಗಳು ನಾಡಗೀತೆಯ ಗೌರವಕ್ಕಾಗಿ ಎದ್ದು ನಿಂತಿದ್ದರು. ಅವರ ಹತ್ತಿರ ಹೆಸರುಗಳನ್ನು ಕೇಳುವ ಮೂಲಕ ಸಭೀಕರ ಎದುರಿಗೆ ನ್ಯುಸೆನ್ಸ್ ಮಾಡಿದ್ರು.
ಮೆಸ್ಕಾಂ, ಕೆಪಿಟಿಸಿಎಲ್ ಆಯೋಜಿಸಿದ್ದ ಉದ್ಘಾಟನಾ ಕಾರ್ಯಕ್ರಮದ ಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಮಂಡಲ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ ನಾಯಕ್ ಅವರನ್ನು ವೇದಿಕೆಯಲ್ಲಿ ಕುಳ್ಳಿರಸಲಾಗಿತ್ತು. ಜೊತೆಯಲ್ಲಿ ಸ್ಥಳೀಯ ಶಕ್ತಿಕೇಂದ್ರದ ಮುಖಂಡರೊಬ್ಬರನ್ನು ವೇದಿಕೆಗೆ ಆಹ್ವಾನಿಸಿದ್ದರು. ಸರ್ಕಾರಿ ಕಾರ್ಯಕ್ರಮ ಎಂಬುದನ್ನು ಮರೆತು ಪಕ್ಷದ ಮುಖಂಡರಿಗೆ ಅಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಸಭೆಯ ನಂತರ ಸ್ಥಳೀಯರು ಸನ್ಮಾನ ಬೇಕಿತ್ತಾ.... ಎಂಬ ಪ್ರಶ್ನೆಯನ್ನು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು.
ಆರಗ ಜ್ಞಾನೇಂದ್ರ ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸುವ ಮೂಲಕ ಸಮರ್ಥ ಮಂತ್ರಿಯಾಗಿದ್ದಾರೆ. ಕಾಂಗ್ರೆಸ್ ನವರು ಮೆತ್ತಗಿದ್ದಾರೆ ಎಂದು ಟೀಕೆ ಮಾಡುತ್ತಿದ್ದಾರೆ. ಆದರೆ ಅವರ ಮೌನ ಕಿಮ್ಮನೆಗೆ ಗೂಟ ಅಂತ ಅರ್ಥಮಾಡಿಕೊಳ್ಳಬೇಕು. ಯೋಗ ಮತ್ತು ಯೋಗ್ಯತೆ ಎರಡು ಕೂಡಿ ಬಂದಿದೆ. ಆರಗ ಜ್ಞಾನೇಂದ್ರ ಮುಖ್ಯಮಂತ್ರಿಯಾಗಬೇಕು. ಸ್ನೇಹಿತನಾದ ನನಗೂ ಸಚಿವ ಸ್ಥಾನ ನೀಡಬೇಕು ಎಂದರು.
ನಾವು ಸೈದ್ಧಾಂತಿಕವಾಗಿ ಬದ್ದವಾಗಿದ್ದೇವೆ. ಕಾಂಗ್ರೆಸ್ನವರಿಗೆ ಏನು ಮಾಡುವುದು ಗೊತ್ತಾಗುತ್ತಿಲ್ಲ. ಅದಕ್ಕಾಗಿ ಚಡ್ಡಿ ಹಿಡಿದು ಓಡಾಡುತ್ತಿದ್ದಾರೆ. ಬೆತ್ತಲೆ ನಿಂತವರಿಗೆ ಬಟ್ಟೆ ಕೊಟ್ಟು ಹಾಕಿಕೊಳ್ಳಲು ಹೇಳಿದರೆ ಸಂಕಟ ಆಗುತ್ತೆ. ನಮ್ಮ ಮನೆಯಲ್ಲಿ ಬಾಳ ಇದೆ ಕೊಡ್ತೀನಿ, ಭಸ್ಮ ಮಾಡಿ ಹಚ್ಚಿಕೊಳ್ಳಲಿ ಎಂದು ಆಯನೂರು ಮಂಜುನಾಥ್ ಹೇಳಿದ್ರು.
ಸೋಮವಾರ ತಾಲ್ಲೂಕಿನ ಬೆಜ್ಜವಳ್ಳಿಯ 110/11 ಕೆವಿ ಸಾಮರ್ಥ್ಯದ ಉಪಸ್ಥಾವರ, ಎಇಇ ಕಚೇರಿ ಉದ್ಘಾಟನೆಯನ್ನು ಗೃಹಸಚಿವ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಉದ್ಘಾಟಿಸಿದರು.
ಆರಗ ಜ್ಞಾನೇಂದ್ರ ಮಾತನಾಡಿ, 1996-97ರಲ್ಲಿ ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಿದರೆ ಆಗ ಹಳ್ಳಿಗಳ ಕಲ್ಪನೆ ಇರಲಿಲ್ಲ. ಅಧಿಕಾರ ಸಿಕ್ಕಾಗ ಈ ರೀತಿಯ ಯೋಜನೆ ಹಾಕಿಕೊಳ್ಳಬೇಕು. ಹಿಂದಿನ 10 ವರ್ಷ ಅವಧಿಯಲ್ಲಿ ದೀಪ ಹಿಡಿದು ಓದುವಂತೆ ಅಗಿತ್ತು. ಮಲೆನಾಡಿಗರು ಬದುಕು ಕಳೆದುಕೊಂಡು ರಾಜ್ಯಕ್ಕೆ ವಿದ್ಯುತ್ ನೀಡಿದ್ದೇವೆ. ನಮಗೆ ವಿದ್ಯುತ್ ಕೊಡಬೇಕು ಎನ್ನುವುದು ದೀರ್ಘಕಾಲದ ಹೋರಾಟ ಮಾಡಿದ್ದೆ. ವಿದ್ಯುತ್ ಸೀಮೆಎಣ್ಣೆ ಇಲ್ಲದ ದೀಪದಂತಿತ್ತು. ಮಹಿಳೆಯರು ಮಿಕ್ಸಿ ರುಬ್ಬಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ಸವಾಲನ್ನು ಸ್ವೀಕರಿಸಿ ಗ್ರಾಮೀಣ ಪ್ರದೇಶಕ್ಕೆ ಗುಣಮಟ್ಟದ ವಿದ್ಯುತ್ ಒದಗಿಸುವ ಕೆಲಸ ಆಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಸಂತೋಷ ವ್ಯಕ್ತಪಡಿಸಿದರು
ಗ್ರಾಮೀಣ ವಿದ್ಯುತೀಕರಣಕ್ಕೆ ಈ ಹಿಂದೆ ಸಾವಿರಾರು ಕೋಟಿ ಇಟ್ಟಿದ್ದರು ಪ್ರಯೋಜನವಾಗುತ್ತಿರಲಿಲ್ಲ. ಆದರೆ ನರೇಂದ್ರ ಮೋದಿ ಅಧಿಕಾರವಧಿಯಲ್ಲಿ ಗ್ರಾಮೀಣ ಪ್ರದೇಶದ ಕಟ್ಟ ಕಡೆಯ ವ್ಯಕ್ತಿಯ ಮನೆಗೂ ವಿದ್ಯುತ್ ನೀಡುವ ಸಂಕಲ್ಪ ಮಾಡಿದ್ದಾರೆ. 2023ರ ವೇಳೆಗೆ ದೇಶದ ಎಲ್ಲಾ ಹಳ್ಳಿಗಳಿಗೂ ಬೆಳಕು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಯನೂರು ಮಂಜುನಾಥ ಮಾತನಾಡಿ, ಕಾನೂನು ಸುವ್ಯವಸ್ಥೆಯನ್ನು ಜವಾಬ್ದಾರಿಯುತವಾಗಿ ಇಟ್ಟುಕೊಂಡಿದ್ದಾರೆ. ಉದ್ವಿಗ್ನ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ ಮೊಟ್ಟ ಮೊದಲ ಗೃಹಸಚಿವ ಆರಗ ಜ್ಞಾನೇಂದ್ರ. ಟೀಕೆ, ಪಾದಯಾತ್ರೆ ಮಾಡುವವರು ಮಾಡ್ತ ಇರಲಿ. ಜ್ಞಾನೇಂದ್ರದ ಪವರ್ ಕಟ್ ಮಾಡುವ ಯೋಚನೆಯಲ್ಲಿ ಇರುವವರ ಪವರ್ ಕಟ್ ಆಗುತ್ತೆ ಎಂದು ವ್ಯಂಗ್ಯವಾಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷ ಅಶೋಕಮೂರ್ತಿ, ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಬೇಗುವಳ್ಳಿ ಸತೀಶ್, ಕರ್ನಾಟಕ ರಾಜ್ಯ ನೀರು ಸರಬರಾಜು ನಿಗಮದ ನಿರ್ದೇಶಕ ಆರ್ ಮದನ್, ಕೆಪಿಟಿಸಿಎಲ್ ಅಧೀಕ್ಷಕ ಎಂಜಿನಿಯರ್ ವೆಂಕಟೇಶ್ ಪ್ರಸಾದ್, ಬೆಜ್ಜವಳ್ಳಿ ಗ್ರಾ.ಪಂ ಸದಸ್ಯ ಮೇಲಿನಕೊಪ್ಪ ಮಹೇಶ್ ಮಾತನಾಡಿದರು, ವೇದಿಕೆಯಲ್ಲಿ ಮೆಸ್ಕಾಂ ನಿರ್ದೇಶರಾದ ಗಿರಿರಾಜ್ , ದಿನೇಶ್, ಬೆಜ್ಜವಳ್ಳಿ ಗ್ರಾ.ಪಂ. ಅಧ್ಯಕ್ಷೆ ದಾಕ್ಷಾಯಣಿ, ಸದಸ್ಯರಾದ ಸುರೇಖಾ, ಆಶಾ, ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಶಶಿಧರ್ ಮತ್ತಿತರರು ಇದ್ದರು.