ಲೌಡ್ ಸ್ಪೀಕರ್ ತಂದ ಅವಾಂತರ
ರಾತ್ರಿಯ ಯಕ್ಷಗಾನ ಯುಗ ಮುಗಿಯಿತೇ..?
ಸರ್ಕಾರದ ನಿರ್ಧಾರದ ವಿರುಧ್ದ ಸ್ಟಾರ್ ಭಾಗವತ ಪಟ್ಲ ಸತೀಶ್ ಶೆಟ್ಟಿ
ಅಸಮಧಾನ
ಯಕ್ಷಗಾನದ ಹಾದಿಯಲ್ಲೇ ಸಣ್ಣಾಟ, ದೊಡ್ಡಾಟ, ಶ್ರೀಕೃಷ್ಣ ಪಾರಿಜಾತ,
ಮುಂತಾದ ಜಾನಪದ ಕಲೆಗಳಿಗೂ ಸಂಕಷ್ಟ
ಲೌಡ್ ಸ್ಪೀಕರ್ ನಿಯಂತ್ರಣ ವಿಚಾರವಾಗಿ ಸರ್ಕಾರ ಹೊರಡಿಸಿರುವ
ಆದೇಶ ಈಗ ಕಲಾವಿದರ ಹೊಟ್ಟೆ ಪಾಡಿಗೆ ಭಂಗ ತರುವ ಹಾದಿಯಲ್ಲಿದ್ದು ಯಕ್ಷಗಾನ, ನಾಟಕ, ದೊಡ್ಡಾಟ, ಸಣ್ಣಾಟ,
ಶ್ರೀ ಕೃಷ್ಣ ಪಾರಿಜಾತ, ಕೋಲ ಮುಂತಾದ ಕಲಾವಿದರಿಗೆ ಪೀಕಲಾಟ ತಂದಿಟ್ಟಿದೆ. ಯಾಕೆಂದರೆ ಇವೆಲ್ಲವು ಕೂಡ
ಬಹುತೇಕ ರಾತ್ರಿಯಿಂದ ಬೆಳಗ್ಗಿನ ಜಾವದವರೆಗೆ ಇಲ್ಲವೆ ಮಧ್ಯರಾತ್ರಿಯ ವರೆಗೆ ಏರ್ಪಾಡಾಗುವ ಕಲಾ ಪ್ರಕಾರಗಳು.
ಏರುಗತಿಯ ಧ್ವನಿ ಹೊರಡಿಸುವ ಮೈಕ್ ಹಾಗೂ ಸ್ಪೀಕರ್ ಅನಿವಾರ್ಯ. ಆದರೆ ಇತ್ತೀಚೆಗೆ ಸರ್ಕಾರ ಮಸೀದಿಗಳಲ್ಲಿ
ಆಜಾನ್ ಹಾಗೂ ದೇವಾಲಯಗಳಲ್ಲಿ ಮುಂಜಾನೆ ಮೈಕ್ ಮೂಲಕ ಹೊರಡಿಸಲಾಗುತ್ತಿದ್ದ ಸುಪ್ರಭಾತ ಇತ್ಯಾದಿಗಳಿಂದ
ಶಬ್ದ ಮಾಲಿನ್ಯ ಆಗುತ್ತದೆ ಎಂದು ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯ ವರೆಗೆ ಸಾರ್ವಜನಿಕ ಸ್ಥಳಗಳಲ್ಲಿ
ಮೈಕ್ ಬಳಕೆ ನಿಷೇಧಿಸಿತ್ತು. ಈಗ ಮೊದಲಿಗೆ ಇದರ ವಿರುದ್ಧ ಸ್ಟಾರ್ ಯಕ್ಷಗಾನ ಭಾಗವತ ಪಟ್ಲ ಸತೀಶ್
ಶೆಟ್ಟಿ ಧ್ವನಿ ಎತ್ತಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಯಕ್ಷಗಾನ ಕಲಾವಿದರಿಗೆ
ತೊಂದರೆಯಾಗುತ್ತಿದ್ದು, ಕಲಾವಿದರ ಹಿತದೃಷ್ಟಿಯಿಂದ
ಯಕ್ಷಗಾನಕ್ಕೆ ರಿಯಾಯಿತಿ ನೀಡಬೇಕು ಎಂದವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಯಕ್ಷಗಾನಕ್ಕೆ
ಯಾವುದೇ ಧರ್ಮದ ತಡೆಯಿಲ್ಲ. ಎಲ್ಲಾ ಧರ್ಮದವರು ಯಕ್ಷಗಾನವನ್ನು ಆಡಿಸುತ್ತಾರೆ. ಸರ್ಕಾರದ ಸೌಂಡ್ ಡೆಸಿಬಲ್ ನೀತಿಯಡಿ ಯಕ್ಷಗಾನ ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ.
ಯಕ್ಷಗಾನ ಶೇ 99ರಷ್ಟು
ರಾತ್ರಿಯಿಂದ ಮುಂಜಾನೆಯವರೆಗೆ ನಡೆಯುತ್ತದೆ. ಸರ್ಕಾರ ಕಲಾವಿದರ ದೃಷ್ಟಿಯಿಂದ ಯಕ್ಷಗಾನಕ್ಕೆ
ರಿಯಾಯಿತಿ ನೀಡಬೇಕು ಎಂದು ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ಯಕ್ಷಗಾನ ಮೇಳದ ಭಾಗವತರೂ ಆದ ಪಟ್ಲ ಸತೀಶ್ ಶೆಟ್ಟಿ ಸರ್ಕಾರಕ್ಕೆ ಕ್ರಮದ ವಿರುದ್ಧ ಮೊದಲ ಧ್ವನಿ ಎತ್ತಿದ್ದಾರೆ.
