ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ರೈತನಿಂದ ಹಲ್ಲೆ
ರೈತನ ಮೇಲೆ ಅವಾಚ್ಯ ನಿಂದಿಸಿ ಹಲ್ಲೆ ನಡೆಸಿದ ಅಧಿಕಾರಿಗಳು
ಯಾರದ್ದು ಸರಿ... ಯಾರದ್ದು ತಪ್ಪು...?
ಅಕ್ರಮ ಮಣ್ಣು ತೆಗೆಯುವ ಕೃತ್ಯ ತಡೆಯಲು ಹೋದ ಅರಣ್ಯ ಸಿಬ್ಬಂದಿ, ರೈತನ ನಡುವೆ ವಾಗ್ವಾದ ವಿಕೋಪಕ್ಕೆ ತಿರುಗಿದ ಘಟನೆ ತೀರ್ಥಹಳ್ಳಿ ತಾಲ್ಲೂಕಿನ ಹೆಗ್ಗೋಡು ಸಮೀಪದ ಬಿಕ್ಕೊಳ್ಳಿ ಗ್ರಾಮದಲ್ಲಿ ಜರುಗಿದೆ.
ಮೀಸಲು ಕಿರು ಅರಣ್ಯ ಪ್ರದೇಶದಲ್ಲಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಗೊಳಿಸಿ ರೈತ ಡಾಕಪ್ಪ ಅಲಿಯಾಸ್ ರಾಕೇಶ್ (35) ಹಲ್ಲೆ ನಡೆಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಆಗುಂಬೆ ಠಾಣೆಗೆ ದೂರು ನೀಡಿದ್ದು ಪಟ್ಟಣದ ಜೆಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರೈತ ಡಾಕಪ್ಪ ಜೆಸಿ ಆಸ್ಪತ್ರೆಗೆ ದಾಖಲಾಗಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ತಳ್ಳಿ ಹಲ್ಲೆ ನಡೆಸಿದ್ದಾರೆ ಎಂದು ರೈತ ರಾಕೇಶ್ ದೂರು ನೀಡಿದ್ದಾರೆ.
ಕೋಡ್ಲು ಗ್ರಾಮದ ಸರ್ವೆ ನಂಬರ್ 139ರ ಅಲಗೇರಿ ಕಿರು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಜೆಸಿಬಿ ಯಂತ್ರದಿಂದ ಮಣ್ಣು ತೆಗೆದು ಸಾಗಿಸುತ್ತಿರುವ ಕುರಿತು ಸಾರ್ವಜನಿಕರಿಂದ ದೂರು ದಾಖಲಾಗಿತ್ತು. ಉಪವಲಯಾರಣ್ಯಧಿಕಾರಿ ಕಿರಣ್ ಕುಮಾರ್, ಅನಿಲ್ ಕುಮಾರ್, ಅರಣ್ಯ ರಕ್ಷಕ ಸಿಬ್ಬಂದಿಗಳಾದ ಅಭಿಷೇಕ್, ಗಣೇಶ್ ಸ್ಥಳಕ್ಕೆ ತೆರಳಿದ್ದು ವಾಗ್ವಾದ ಹಲ್ಲೆಯಲ್ಲಿ ಅಂತ್ಯವಾಗಿದೆ.
ಆಗುಂಬೆ ವಲಯಾರಣ್ಯ ವ್ಯಾಪ್ತಿಯ ಗ್ರಾಮದಲ್ಲಿ ಘಟನೆ ನಡೆದಿದ್ದು ತೀರ್ಥಹಳ್ಳಿ ಎಸಿಎಫ್ ಪ್ರಕಾಶ್, ಆಗುಂಬೆ ವಲಯಾರಣ್ಯಾಧಿಕಾರಿ ಮಧುಕರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಲ್ಲೂಕಿನಲ್ಲಿ ಕಾಡುಗಳನ್ನೇ ನಂಬಿಕೊಂಡು ರೈತರು, ಬಡವರು ಜೀವನ ನಡೆಸುತ್ತಿದ್ದಾರೆ. ಕಾಡು ಅವರ ಪ್ರತಿನಿತ್ಯದ ಒಂದು ಭಾಗ. ಕಾಡಿನ ಒಳಗೆ ನಿಗ್ಗಬಾರದು ವಸ್ತು ಸಂಗ್ರಹಿಸಬಾರದು ಎಂಬ ಆದೇಶವಿದ್ದರು ಓಬೀರಾಯನ ಕಥೆ ಇಟ್ಟುಕೊಂಡು ಗಲಾಟೆ ನಡೆಸಲಾಗುತ್ತಿದೆ. ತೋಟ ರಕ್ಷಿಸಿಕೊಳ್ಳಲು ಹೊಸ ಮಣ್ಣಿನ ಅವಶ್ಯಕತೆ ಇದೆ. ಅರಣ್ಯ ಸಿಬ್ಬಂದಿ ಕೂಡ ಶಾಂತಿಯಿಂದ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿಲ್ಲ. ನೇರವಾಗಿ ಹಿಟ್ ಮಾಡುವ ಮೂಲಕ ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿದೆ.