ಏನು ಪ್ರಯೋಜನ ಆಗಿಲ್ಲ... ಮತ್ತೆ ಮರಳು ಲೂಟಿ..
ಅಧಿಕಾರಿಗಳು ದುಡ್ಡು ತಕೊಂಡು ಬೆಚ್ಚಗೆ ಕುಂತಿದ್ದಾರೆ...
ಕಳ್ಳಾಟದ ಅಧಿಕಾರಿ ವರ್ಗಕ್ಕೆ ಎಂಎಲ್ಎ ಲೆಕ್ಕಕ್ಕಿಲ್ಲ...
ತೀರ್ಥಹಳ್ಳಿಯ ಭೀಮನಕಟ್ಟೆ, ಬಸವಾನಿ ಸುತ್ತಮುತ್ತಲ ಗ್ರಾಮದಲ್ಲಿ ಅಕ್ರಮ ಮರಳು ಸಂಗ್ರಹ ಮಾಡಲಾಗಿದ್ದು ರಾತ್ರೋ ರಾತ್ರೊ ದೂರದ ಊರುಗಳಿಗೆ ಲಾರಿಗಳಲ್ಲೇ ರಾಜಾರೋಷವಾಗಿ ಮರಳು ಸಾಗಿಸುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ.
ಬಸವಾನಿಯಲ್ಲಿ ಸಂಗ್ರಹವಾದ ಮರಳು ಕಟ್ಟೇಹಕ್ಕಲು ಮಾರ್ಗವಾಗಿ, ಮುಡುಬ ಶಿವಮೊಗ್ಗ ಸಾಗುತ್ತಿದೆ, ಇನ್ನೊಂದು ಕಡೆಯಿಂದ ಕೊಪ್ಪ, ಶೃಂಗೇರಿ ಸಾಗುತ್ತಿದೆ. ಭೀಮನಕಟ್ಟೆಯಲ್ಲಿ ಸಂಗ್ರಹಿಸಿದ ಮರಳು ಸ್ಥಳೀಯರಿಗೆ ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಸಕ್ರಮದ ಕೂಗು ಕೇಳಿ ಬಂದಿದ್ದರು ಅಧಿಕಾರಿಗಳ ಕಣ್ಣಳತೆಯಂತೆ ಎಗ್ಗಿಲ್ಲದೆ ಅಕ್ರಮ ನಡೆಯುತ್ತಿದೆ.
ಶಾಸಕ ಆರಗ ಜ್ಞಾನೇಂದ್ರ ಒಂದು ತಿಂಗಳ ಹಿಂದೆ ವಿವಿಧ ಮರಳು ಕ್ವಾರಿಗಳಿಗೆ ಭೇಟಿ ನೀಡಿ ದಂಧೆ ನಿಯಂತ್ರಿಸುವಂತೆ ಬಿಗಿ ಪಟ್ಟು ಹಿಡಿದಿದ್ದರು. ಒಂದೆರಡು ದಿನ ದಂಧೆಗೆ ಬ್ರೇಕ್ ಬಿತ್ತಾದರೂ ಪೂರ್ಣ ಮುಕ್ತಾಯದ ಹಂತ ಕಾಣಲಿಲ್ಲ. ಮಳೆಗಾಲದಲ್ಲಿ ಬಿಸಿ ಬೋಂಡಕ್ಕೆ ಬೇಡಿಕೆ ಹೆಚ್ಚಿದಂತೆ ಮರಳಿನ ಬೇಡಿಕೆ ಕೂಡ ಹೆಚ್ಚಿದೆ. ಅದನ್ನೇ ಲೂಟಿಕೋರರು ಲಾಭಿಗೆ ತಿರುಗಿಸಿಕೊಂಡಿದ್ದು ರಾತ್ರೋ ರಾತ್ರೊ ನೂರಾರು ಲೋಡ್ ಮರಳು ಸಾಗಾಣೆಯಾಗುತ್ತಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಎಲ್ಲೆಲ್ಲಿ, ಯಾರು ಮರಳು ಸಂಗ್ರಹಿಸಿಕೊಂಡಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಇದೆ. ಆದರೂ ಕೂಡ ಮರಳು ನಿಯಂತ್ರಣ ಮಾಡುವ ಯಾವ ಕ್ರಮಕ್ಕೂ ಮುಂದಾಗುತ್ತಿಲ್ಲ. ಸಿಕ್ಕಷ್ಟು ತಿಂದು ಮಲಗುವ ಸ್ಥಿತಿಯಲ್ಲಿ ಸರ್ಕಾರದಿಂದ ಬೊಕ್ಕಸ ಕಾಯಲು ಕುಳಿತಿರುವ ಅಧಿಕಾರಿಗಳೇ ಲೂಟಿಗೆ ಗ್ರೀನ್ ಸಿಗ್ನಲ್ ನೀಡಿಕೊಂಡು ಗಮ್ಮತ್ತಾಗಿ ಕುಳಿತುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ.
ದುಡ್ಡಿನ ಮುಂದೆ ಎಂಎಲ್ಎ ಅಬ್ಬರ ಗೌಣವಾಗತೊಡಗಿದೆ. ಎಲ್ಲೆಲ್ಲಿ ಯಾವ ಮಾರ್ಗದಲ್ಲಿ ಹೋಗಬೇಕೆಂಬ ರೂಟ್ ಗೈಡ್ ಗಳಾಗಿ ವಿವಿಧ ಇಲಾಖೆಯ ಅಧಿಕಾರಿಗಳೇ ದಂಧೆಗೆ ಬೆಂಬಲವಾಗಿ ನಿಂತಿದ್ದಾರೆ. ಸೀಜ್ ಮಾಡಿದ ನೆಪ ಮಾತ್ರ ಹೇಳಲಾಗುತ್ತಿದ್ದು ಹಿಡಿದ ಮರಳಿನ ಲೆಕ್ಕಾಚಾರ ಸಿಗದಂತಾಗಿದೆ. ಒಟ್ಟಿನಲ್ಲಿ ಆರಗ ಜ್ಞಾನೇಂದ್ರರ ಬೊಬ್ಬೆ ನಿಷ್ಪ್ರಯೋಜಕವಾದಂತಾಗಿದೆ.