ಜಿಲ್ಲಾಡಳಿತ, ತಾಲೂಕು ಆಡಳಿತ, ಭೂ, ಗಣಿ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಜವಾಬ್ದಾರಿ ಮರೆತಿವೆ
ತೀರ್ಥಹಳ್ಳಿಯಲ್ಲಿ ಅಧಿಕೃತವಾಗಿ 13 ಮರಳು ಕ್ವಾರಿಗಳಿದ್ದು ಎಲ್ಲವನ್ನು ಕಾನೂನು ಬದ್ದವಾಗಿ ಚಾಲನೆಗೊಳಿಸಿದಲ್ಲಿ ಮರಳು ಅಕ್ರಮ ತಡೆಗಟ್ಟಬಹುದು. ಅದನ್ನು ಮಾಡದೆ ಕೇವಲ ಕೇಸು ಹಾಕುವ ಮೂಲಕ ನಿರುದ್ಯೋಗಿ ಯುವಕರನ್ನು ಅವಮಾನ ಮಾಡಲಾಗುತ್ತಿದೆ. ಇದರಿಂದ ಜನರಿಗೂ ಕಡಿಮೆ ದರದಲ್ಲಿ ಮರಳು ಲಭ್ಯವಾಗುತ್ತದೆ. ಆದರೆ ಈ ವ್ಯವಸ್ಥೆ ಸರಿಪಡಿಸಬೇಕಾದ ತಾಲೂಕು ಆಡಳಿತ, ಜನಪ್ರತಿನಿಧಿಗಳು ಸುಮ್ಮನಿರುವುದು ಆಶ್ಚರ್ಯಕರ ಇದು ಖಂಡನೀಯ ಎಂದು ನಿವೃತ್ತ ಎಸ್ ಪಿ ಕಾಶಿ ಹೇಳಿದ್ದಾರೆ.
ತೀರ್ಥಹಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಒಂದೇ ಸಲ ಎಲ್ಲ ಮರಳು ಕ್ವಾರಿಗಳನ್ನ ಚಾಲನೆ ಮಾಡದೇ ಇರುವುದರಿಂದ ಕೃತಕ ಅಭಾವ ಸೃಷ್ಟಿಯನ್ನು ಇಲಾಖೆ ಹಾಗೂ ತಾಲೂಕು ಆಡಳಿತವೇ ಪರೋಕ್ಷವಾಗಿ ಸೃಷ್ಟಿ ಮಾಡುತ್ತಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅಂದಾಜಿನ ಪ್ರಕಾರ ತಿಂಗಳಿಗೆ 8 ಕೋಟಿ ನಷ್ಟ ಆಗುತ್ತಿದೆ. ಎಲ್ಲ ಲೆಕ್ಕ ಹಾಕಿದರೆ ಕನಿಷ್ಠ 6 ಸಾವಿರ ಜನರಿಗೆ ಉದ್ಯೋಗ ದೊರಕುತ್ತದೆ. ಆದರೆ ಭೂ ಗಣಿ ವಿಜ್ಞಾನ ಇಲಾಖೆ, ಜಿಲ್ಲಾ ಹಾಗೂ ತಾಲೂಕು ಆಡಳಿತ, ಪೊಲೀಸ್ ಇಲಾಖೆ ತಮ್ಮ ಜವಾಬ್ದಾರಿ ನಿಭಾಯಿಸದೆ ಯುವಕರಿಗೆ ಮರಳು ಗಳ್ಳರ ಪಟ್ಟ ಕಟ್ಟುತ್ತಿದೆ ಎಂದು ಆರೋಪಿಸಿದರು.
ಹೊಟ್ಟೆ ಪಾಡಿಗೆ ಮರಳು ಸಾಗಿಸುವರಿಗೆ ದಬಾವಣೆ ಮಾಡುವ ಪೊಲೀಸ್ ಇಲಾಖೆ ಆಗುಂಬೆ ಪೊಲೀಸ್ ಠಾಣೆಗೆ ಸೇರಿದ 10 ಎಕರೆ ಪ್ರದೇಶದಲ್ಲಿ ಗುತ್ತಿಗೆದಾರನೊಬ್ಬ 1600 ಲೋಡು ಮಣ್ಣು ಸಾಗಿಸಿದರು ಕಣ್ಣು ಮುಚ್ಚಿ ಕುಳಿತಿದೆ. ಬಡವರಿಗೆ ಮತ್ತು ಶ್ರೀಮಂತರಿಗೆ ಕಾನೂನು ಬೇರೆ ಇದೆಯಾ ಎಂದು ಕಾಶಿ ಪ್ರಶ್ನೆ ಮಾಡಿದರು.
ಸುದ್ದಿ ಗೋಷ್ಠಿಯಲ್ಲಿ ನಿವೃತ್ತ ಎಸ್ ಪಿ ಮಂಗಳ ನಟರಾಜ್, ಅಸಿಕೊಪ್ಪ ಮಹೇಶ್, ಕೋಣಂದೂರು ಪೂರ್ಣೇಶ್ ಇನ್ನಿತರರು ಉಪಸ್ಥಿತರಿದ್ದರು.