ಮಂಗಳೂರಿನ ವೆನ್ಲಾಕ್‌ನಲ್ಲಿ ಬಿಪಿಎಲ್‌ಗೆ ಉಚಿತ ಚಿಕಿತ್ಸೆ

ಹೃದ್ರೋಗ ಚಿಕಿತ್ಸೆ ಆರಂಭ, ಎಪಿಎಲ್‌ಗೆ ರಿಯಾಯಿತಿ
ಸಂಪೂರ್ಣ ವಿವರ ನೀಡಿದ ವೆನ್ಲಾಕ್‌ ಆಸ್ಪತ್ರೆ ಅಧೀಕ್ಷಕ ಡಾ.ಶಿವಪ್ರಕಾಶ್

‌ಮಂಗಳೂರು ಜಿಲ್ಲಾಸ್ಪತ್ರೆ ವೆನ್ಲಾಕ್‌ನ 175 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ ಹೃದ್ರೋಗ ಚಿಕಿತ್ಸೆ

ಬಿಪಿಎಲ್ ಕಾರ್ಡ್‌ದಾರರಿಗೆ 8 ರೀತಿಯ ಹೃದ್ರೋಗ ಚಿಕಿತ್ಸೆಗಳು ಉಚಿತ, ಆಂಜಿಯೋಗ್ರಾಂಗೆ 5,000 ರೂ. ಶುಲ್ಕ

ಹೃದ್ರೋಗ ತಜ್ಞ ಡಾ. ನರಸಿಂಹ ಪೈ ನೇತೃತ್ವದಲ್ಲಿ ಆಂಜಿಯೋಗ್ರಾಂ ಮತ್ತು ಆಂಜಿಯೋಪ್ಲಾಸ್ಟಿ ಚಿಕಿತ್ಸೆಗಳು ಆರಂಭ

ಬೆಂಗಳೂರಿನ ಸಿ.ವಿ. ರಾಮನ್‌ ಜನರಲ್‌ ಆಸ್ಪತ್ರೆ ಬಳಿಕ ಪ್ರಥಮ ಬಾರಿಗೆ ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್‌ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸೆ ಆರಂಭಿಸಿದ್ದು, ಶುಕ್ರವಾರ ತನಕ 9 ಮಂದಿ ಚಿಕಿತ್ಸೆ ಪಡೆದಿದ್ದಾರೆ.ವೆನ್ಲಾಕ್‌ ಆಸ್ಪತ್ರೆಯ ಸರ್ಜಿಕಲ್‌ ಬ್ಲಾಕ್‌ನಲ್ಲಿ ಕೆಎಂಸಿ ಆಸ್ಪತ್ರೆಯಿಂದ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಕ್ಯಾಥ್‌ಲ್ಯಾಬ್‌ ನಿರ್ಮಿಸಿ, ತಜ್ಞ ವೈದ್ಯರು, ನರ್ಸಿಂಗ್‌ ಸಿಬ್ಬಂದಿ, ತಂತ್ರಜ್ಞರ ನೇಮಕ ಮಾಡಿದ್ದು, ಸ್ಟಂಟ್‌ ಮತ್ತಿತರ ಔಷಧಗಳನ್ನು ಸರಕಾರ ಪೂರೈಕೆ ಮಾಡುತ್ತದೆ.

ವೆನ್ಲಾಕ್‌ ಆಸ್ಪತ್ರೆಯ 175 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ ಹೃದ್ರೋಗ ಚಿಕಿತ್ಸೆಗೆ ಚಾಲನೆ ನೀಡಲಾಗಿದೆ. ಹೊಸ ವ್ಯವಸ್ಥೆಯನ್ನು ಸೆ.21ರಂದು ರಾಜ್ಯ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಉದ್ಘಾಟಿಸಿದ್ದಾರೆ.

ಸರ್ಕಾರದ ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆ ಮೂಲಕ ಚಿಕಿತ್ಸೆ ನಡೆಯುತ್ತಿದೆ. ಬಿಪಿಎಲ್‌ ಕಾರ್ಡ್‌ದಾರರಿಗೆ ಲಭ್ಯ 8 ಚಿಕಿತ್ಸೆಗಳೂ ಉಚಿತವಾಗಿದ್ದು, ಆಂಜಿಯೋಗ್ರಾಂಗೆ ಮಾತ್ರ ಎಬಿಆರ್‌ಕೆಯಲ್ಲಿ ಯಾವುದೇ ಕೋಡ್‌ ನಿಗದಿ ಮಾಡದ ಹಿನ್ನೆಲೆಯಲ್ಲಿ ಬಿಪಿಎಲ್‌ ಕಾರ್ಡ್‌ದಾರರೂ 5 ಸಾವಿರ ರೂ. ಪಾವತಿ ಮಾಡಬೇಕಾಗುತ್ತದೆ.

ಎಪಿಎಲ್‌ ಕಾರ್ಡ್‌ದಾರರಿಗೆ ಸರಕಾರದ ಎಬಿಎಆರ್‌ಕೆ ಮಂಜೂರಾತಿ ಮೊತ್ತ ನಿಗದಿಪಡಿಸಲಾಗಿದೆ. ಆಯುಷ್ಮಾನ್‌ ಕಾರ್ಡ್‌ ಮಾಡಿಸಿದವರಿಗೆ ಶೇ. 30 ರಿಯಾಯಿತಿ ಮೂಲಕ ಶೇ. 70 ಮೊತ್ತ ಪಾವತಿಸಬೇಕು. ಹೃದ್ರೋಗ ತಜ್ಞ ಡಾ. ನರಸಿಂಹ ಪೈ ನೇತೃತ್ವದ ತಂಡ ಆಂಜಿಯೋಗ್ರಾಂ, ಆಂಜಿಯೋಪ್ಲಾಸ್ಟಿ ಮಾಡುತ್ತಿದ್ದು, ಮುಂದೆ ಪೇಸ್‌ಮೇಕರ್‌, ಬ್ರೈನ್‌ ಆಂಜಿಯೋಗ್ರಾಂ, ಮಕ್ಕಳ ಹೃದಯ ರಂಧ್ರ ಶಸ್ತ್ರಚಿಕಿತ್ಸೆಗೆ ಎಎಸ್‌ಡಿ ಮತ್ತು ವಿಎಸ್‌ಡಿ ಮೊದಲಾದ ಚಿಕಿತ್ಸೆ ಲಭಿಸಲಿದೆ.

ಕ್ಯಾಥ್‌ಲ್ಯಾಬ್‌ ಉದ್ಘಾಟನೆ ಬಳಿಕ ಆಂಜಿಯೋಪ್ಲಾಸ್ಟಿ ಮತ್ತು ಆಂಜಿಯೋಗ್ರಾಂ ಚಿಕಿತ್ಸೆ ಆರಂಭಿಸಿದ್ದು, ಬಡ, ಮಧ್ಯಮ ವರ್ಗಕ್ಕೆ ತುಂಬಾ ಅನುಕೂಲವಾಗಿದೆ. ಎಪಿಎಲ್‌ ಕಾರ್ಡ್‌ದಾರರಿಗೂ ಆಯುಷ್ಮಾನ್‌ ಯೋಜನೆ ಮೂಲಕ ರಿಯಾಯಿತಿ ದರದಲ್ಲಿ ಚಿಕಿತ್ಸೆ ಲಭಿಸಲಿದೆ. ಹೆಚ್ಚಿನ ವಿವರಗಳಿಗೆ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆ ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ಅಧೀಕ್ಷಕ ವೈದ್ಯ ಡಾ.ಶಿವಪ್ರಕಾಶ್ ತಿಳಿಸಿದ್ದಾರೆ.

ವೆನ್ಲಾಕ್‌ನಲ್ಲಿ ಎಪಿಎಲ್‌ಗೆ ಹೃದ್ರೋಗ ಚಿಕಿತ್ಸೆ ಮೊತ್ತ (ಶೇ.30 ರಿಯಾಯಿತಿ ದರ)

ಆಂಜಿಯೋಗ್ರಾಂ ಸಹಿತ ಸಿಂಗಲ್‌ ಸ್ಟಂಟ್‌: 42,000 ರೂ.

ಆಂಜಿಯೋಗ್ರಾಂ ಸಹಿತ ಡಬಲ್‌ ಸ್ಟಂಟ್‌: 59,500 ರೂ.

ಪಿಟಿಸಿಎ ಹೆಚ್ಚುವರಿ ಸ್ಟಂಟ್‌: 20,194 ರೂ.

ತುರ್ತು, ಆಂಜಿಯೋಗ್ರಾಂ ಸಹಿತ: 42,000 ರೂ.

2 ಡ್ರಗ್‌ ಎಲ್ಯೂಟಿಂಗ್‌ ಸ್ಟಂಟ್‌: 59,500 ರೂ.

ಥ್ರಂಬೋಲಿಸಿಸ್‌ ಸಹಿತ ಕವಾಟ: 7,000 ರೂ.

ತಾತ್ಕಾಲಿಕ ಪೇಸ್‌ ಮೇಕರ್‌: 7,000 ರೂ.

ಆಂಜಿಯೋಗ್ರಾಂ: 7,000 ರೂ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post