ಸಮಾನ ಮನಸ್ಕ ವೇದಿಕೆಯಿಂದ ಪ್ರತಿಭಟನೆಗೆ ಕರೆ
ತೀರ್ಥಹಳ್ಳಿ ತಾಲ್ಲೂಕು
ಜೆ.ಸಿ.ಆಸ್ಪತ್ರೆಯ 6 ವೈದ್ಯರನ್ನು ಒಮ್ಮೆಲೆ ವರ್ಗಾವಣೆ ಮಾಡಿರುವ ಸರ್ಕಾರದ ಕ್ರಮ ವಿರೋಧಿಸಿ ಗುರುವಾರ
ಸಮಾನ ಮನಸ್ಕ ವೇದಿಕೆ ಪ್ರತಿಭಟನೆಗೆ ಕರೆ ನೀಡಿದೆ. ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆ ರಾಜ್ಯದ ಅತ್ಯುತ್ತಮ
ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಒಂದಾಗಿದ್ದು ವೈದ್ಯರುಗಳ ಉತ್ತಮ ಚಿಕಿತ್ಸೆ ಮತ್ತು ಸ್ವಚ್ಚತೆಗೂ
ಹೆಸರುವಾಸಿಯಾಗಿದೆ. ಹಾಲಿ ವರ್ಗಾವಣೆಯಾಗಿರುವ ಎಲ್ಲಾ ವೈದ್ಯರು ಇಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು
ತಾಲ್ಲೂಕು ಮಾತ್ರವಲ್ಲದೇ ಅಕ್ಕ ಪಕ್ಕದ ತಾಲ್ಲೂಕುಗಳಿಂದಲೂ ರೋಗಿಗಳು ಇಲ್ಲಿಗೆ ಚಿಕಿತ್ಸೆ ಪಡೆಯಲು
ಆಗಮಿಸುತ್ತಿದ್ದರು. ಹಾಗಾಗಿ ಇಲ್ಲಿಗೆ ನೂತನ ವೈದ್ಯರುಗಳ ನೇಮಕಾತಿಯ ಕುರಿತು ಯಾವುದೇ ಖಚಿತ ಭರವಸೆಯನ್ನು
ಸರ್ಕಾರ ನೀಡದೆ ವರ್ಗಾವಣೆ ಮಾಡಿರುವುದು ಜನ ವಿರೋಧಿ ನಡೆಯೆಂದು ಸಮಾನ ಮನಸ್ಕ ವೇದಿಕೆ ಆರೋಪಿಸಿದೆ.
ಇದನ್ನು ಪ್ರತಿಭಟಿಸುವ ಸಲುವಾಗಿ ಗುರುವಾರ 11 ಗಂಟೆಗೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ
ಆಯೋಜಕರಲ್ಲಿ ಒಬ್ಬರಾಗಿರುವ ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಹಾಲಿ ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ
ಮಾಹಿತಿ ನೀಡಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.
