ಹಮಾಲಿ ರಾಜೇಶ್ ಎಂ.ಎ.ಗೆ ಗಂಭೀರ ಗಾಯ
ಬಡ ಕುಟುಂಬಕ್ಕೆ ಬೇಕಿದೆ ಕಾನೂನಿನ ರಕ್ಷಣೆ
ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿಯಲ್ಲಿ ಗ್ರಾನೈಟ್ ಅನ್ಲೋಡ್ ವೇಳೆ ದೊಡ್ಡ ಅವಘಡ ಸಂಭವಿಸಿದ್ದು ಹಮಾಲಿ ರಾಜೇಶ್ ಎಂ.ಎ. (26)ಗೆ ತೀವ್ರ ಸ್ವರೂಪದ ಗಂಭೀರ ಗಾಯಗಳಾಗಿದ್ದು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾರೆ.
ಸೆಪ್ಟೆಂಬರ್ 19ರ ಗುರುವಾರ ರಾಜಸ್ಥಾನದಿಂದ ಆರ್.ಜೆ.29.ಜಿ.ಬಿ.0763 ನೊಂದಾಣಿಯ ಲಾರಿಯಲ್ಲಿ ಬೆಟ್ಟಮಕ್ಕಿಯ ಸತೀಶ್ ಎಂಬುವವರ ಮನೆಗೆ ಟೈಲ್ಸ್, ಗ್ರಾನೈಟ್ ಬಂದಿರುತ್ತದೆ. ಅಂದು ಸ್ಥಳೀಯವಾಗಿ ಹಮಾಲಿ ವೃತ್ತಿ ಮಾಡುತ್ತಿದ್ದ ಕುಶಾವತಿ ವಾಸಿ ರಾಜೇಶ್ ಎಂ.ಎ. ಇವರನ್ನು ಲಾರಿಯವರು ಸಂಪರ್ಕಿಸಿ ಗ್ರಾನೈಟ್ ಕೆಳಗೆ ಇಳಿಸಲು ಕರೆದುಕೊಂಡು ಹೋಗಿದ್ದಾರೆ. ಗ್ರಾನೈಟ್ ಕೆಳಗಿಳಿಸುವ ವೇಳೆ ಲಾರಿಯಲ್ಲಿ ಜೋಡಿಸಿದ್ದ ಗ್ರಾನೈಟ್ ಇದ್ದಕ್ಕಿದ್ದಂತೆ ಜಾರಿ ರಾಜೇಶ್ ಮೈ, ಕೈ, ಕಾಲುಗಳ ಮೇಲೆ ಬಿದ್ದಿದೆ. ಇದರಿಂದ ತೀವ್ರ ಸ್ವರೂಪದ ಗಾಯಗಳಾಗಿದ್ದ ಅವರಿಗೆ ತೀರ್ಥಹಳ್ಳಿ ಜೆ.ಸಿ. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ತುರ್ತು ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿಯೂ ಚಿಕಿತ್ಸೆ ಸಿಗದ ಹಿನ್ನಲೆಯಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತೀರಾ ಬಡತನದ ಜೀವನ ನಡೆಸುತ್ತಿರುವ ರಾಜೇಶ್ ಅವರು 72 ವರ್ಷದ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದಾರೆ. ರಾಜೇಶ್ ಹಮಾಲಿ ವೃತ್ತಿ ಮಾಡಿ ಅದರಿಂದ ಸಂಪಾದಿಸಿದ ಹಣದಿಂದ ತಾಯಿ ಪ್ರಭಾವತಿ ಅವರಿಗೆ ಆಸರೆಯಾಗಿದ್ದರು. ಇದೀಗ ಆಕಸ್ಮಿಕವಾಗಿ ಸಂಭವಿಸಿದ ದುರಂತದಿಂದಾಗಿ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಇಬ್ಬರು ಸಹೋದರರಿಗೆ ಮದುವೆಯಾಗಿದ್ದು ಇಬ್ಬರು ಕೂಡ ಪ್ರತ್ಯೇಕವಾಗಿ ತಮ್ಮ ಸಂಸಾರದ ಜೊತೆಯಲ್ಲಿ ಜೀವನ ನಡೆಸುತ್ತಿದ್ದಾರೆ.
ಕಾನೂನಿನ ಅರಿವು ಇಲ್ಲದ ಈ ಕುಟುಂಬ ತಕ್ಷಣಕ್ಕೆ ಏನು ಮಾಡಬೇಕು ಎಂದು ತಿಳಿಯದೆ ಅವರಿವರ ಬಳಿ ಸಹಾಯ ಬೇಡಿದ್ದಾರೆ. ಸಿಕ್ಕ ಅಲ್ಪಸ್ವಲ್ಪ ಸಹಕಾರದಲ್ಲಿ ಸದ್ಯದ ಚಿಕಿತ್ಸೆ ನಡೆಯುತ್ತಿದೆ. ಆದರೆ ತೀವ್ರವಾಗಿ ಗಾಯಗೊಂಡಿರುವ ರಾಜೇಶ್ ಅಂದಾಜು ಎರಡು ವರ್ಷಗಳ ಕಾಲ ನಡೆಯಲು ಸಾಧ್ಯವಿಲ್ಲ. ಎರಡೂ ಕಾಲಿನ ಮೂಳೆ, ಕೈ ಜಖಂಗೊಂಡಿದೆ.
ಹಮಾಲಿ ಕೆಲಸಕ್ಕೆ ಕರೆದುಕೊಂಡು ಹೋದ ಲಾರಿಯವರು ಸೌಜನ್ಯ ಮರೆತು ಸಹಕರಿಸದೆ ತೀರ್ಥಹಳ್ಳಿಯಿಂದ ತೆರಳಿದ್ದಾರೆ. ಅನ್ ಲೋಡ್ ಮಾಡಿಸಿಕೊಳ್ಳುತ್ತಿದ್ದ ಮನೆಯವರು ಸೌಜನ್ಯ ತೋರಲಿಲ್ಲ. ಲಾರಿಯಲ್ಲಿ ನಡೆದ ಅಪಘಾತ ಇದೀಗ ಮರೆಮಾಚುವ ಪ್ರಯತ್ನ ನಡೆಯುತ್ತಿರುವುದು ಅಮಾನವೀಯತೆಯ ಕರಾಳ ಮುಖವನ್ನು ಬಯಲು ಮಾಡುತ್ತಿದೆ.
ರಾಜೇಶ್ ತನಗಾದ ಗಂಭೀರ ಸ್ವರೂಪದ ಗಾಯಗಳನ್ನು ಪೂರ್ಣ ಸರಿಪಡಿಸಿಕೊಳ್ಳಲು ಜೀವಮಾನದಲ್ಲಿ ಸಾಧ್ಯವಿಲ್ಲ. ಮೊದಲಿನಂತೆ ಓಡಾಡಲು ಕನಿಷ್ಟ 3 ವರ್ಷಗಳೇ ಬೇಕು. ಅಲ್ಲಿಯವರೆಗೆ ತಗಲುವ ಚಿಕಿತ್ಸೆ ವೆಚ್ಚ, ಓಡಾಟ ಎಲ್ಲವನ್ನು ನಿಭಾಯಿಸುವುದು ಕಷ್ಟವಾಗಿದೆ. ತಾಯಿ ಜವಾಬ್ದಾರಿ ವಹಿಸಿದ್ದ ಮಗ ಹಾಸಿಗೆ ಹಿಡಿದಿದ್ದು ವಯಸ್ಸಾದ ತಾಯಿ ಮುಂದೇನು ಎಂದು ಚಿಂತೆಗೆ ಬಿದ್ದಿದ್ದಾರೆ. ಮಂಗಳವಾರ ತಾಯಿ ಪ್ರಭಾವತಿ ಕಾನೂನಿನ ರಕ್ಷಣೆ ಕೋರಿ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.