ಶಾಲಾ ವಾಹನ - ಆರ್ಟಿಓ ಅನುಮತಿಗಿಂತ ಹೆಚ್ಚಿನ ಮಕ್ಕಳ ಪ್ರಯಾಣ ಅಪರಾಧ
ಗಾಂಜಾ ಸೇವನೆ, ಮಾರಾಟ, ಬೆಳೆಯುವ ಬಗ್ಗೆ ಮಾಹಿತಿ ಕೊಡಿ – ಡಿವೈಎಸ್ಪಿ ಗಜಾನನ ವಾಮನ ಸುತಾರ
ತೀರ್ಥಹಳ್ಳಿಗೆ ಹೊರ ರಾಜ್ಯ, ಜಿಲ್ಲೆಯಿಂದ ಆಗಮಿಸುತ್ತಿರುವ ಬಾಡಿಗೆದಾರರ ಬಗ್ಗೆ ಮನೆಯ ಮಾಲೀಕರು ಜಾಗ್ರತೆ ವಹಿಸಬೇಕು. ಕಾರ್ಮಿಕರು, ಉದ್ಯೋಗಿಗಳ ಸೋಗಿನಲ್ಲಿ ಅಪರಾಧ ಪ್ರಕರಣದ ಹಿನ್ನಲೆ ಹೊಂದಿರುವವರು ಆಗಮಿಸುವ ಸಾಧ್ಯತೆ ಇದೆ. ಪ್ರತಿಯೊಬ್ಬ ಬಾಡಿಗೆದಾರನ ಆಧಾರ್ ಕಾರ್ಡ್, ಪಡಿತರ ಚೀಟಿ, ಪಾಸ್ಪೋರ್ಟ್ ಸೇರಿದಂತೆ ಇತರೆ ಮಾಹಿತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಎಂದು ಡಿವೈಎಸ್ಪಿ ಗಜಾನನ ವಾಮನ ಸುತಾರ ತೀರ್ಥಹಳ್ಳಿಯ ಪೊಲೀಸ್ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಎಚ್ಚರಿಕೆ ನೀಡಿದರು.ಶಾಲಾ ವಾಹನದಲ್ಲಿ ಆರ್ಟಿಓ ಅನುಮತಿಗಿಂತ ಹೆಚ್ಚು ಸಂಖ್ಯೆಯ ಮಕ್ಕಳಿಗೆ ಪ್ರಯಾಣಕ್ಕೆ ಅವಕಾಶ ನೀಡುವುದು ಅಪರಾಧ. ಸಾಮರ್ಥ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಸಾಗಿಸುವ ಘಟನೆ ಹೆಚ್ಚುತ್ತಿದೆ. ಸುರಕ್ಷಿತ ದೃಷ್ಟಿಯಿಂದ ಶಾಲಾ ವಾಹನಗಳ ಮೇಲೆ ನಿಗಾವಹಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.
ಸಾಮಾಜಿಕ ಜಾಲತಾಣ, ಆನ್ಲೈನ್ ವಂಚನೆ ಬಗ್ಗೆ ಸಾರ್ವಜನಿಕರು ಹೆಚ್ಚಿನ ಜಾಗ್ರತೆ ವಹಿಸಬೇಕು. ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ಇತರ ಮಹತ್ವದ ದಾಖಲೆಗಳನ್ನು ಅಪರಿಚಿತರಿಗೆ ನೀಡಬಾರದು. ಯುಬಿಟಿ, ಡಿಜಿಟಲ್ ಕರೆನ್ಸಿಗಳ ಬಗ್ಗೆ ಎಚ್ಚರ ವಹಿಸಬೇಕು. ಶಾಂತಿ, ಸುವ್ಯವಸ್ಥೆ ಹಾಳು ಮಾಡುವ ಪೋಸ್ಟ್ಗಳ ಮೇಲೆ ನಿಗಾ ಇಡಲಾಗಿದೆ. ಜಾತಿ, ಧರ್ಮ, ದ್ವೇಶಕಾರುವ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹಾಕುವುದು ಅಪರಾಧ ಎಂದರು.
ಗಾಂಜಾಮುಕ್ತ ತಾಲ್ಲೂಕು ಮಾಡುವ ನಿಟ್ಟಿನಲ್ಲಿ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಎನ್ಡಿಪಿಎಸ್ ಕಾಯ್ದೆಯಡಿ ಇಲ್ಲಿಯವರೆಗೆ 21 ಗಾಂಜಾ ಪ್ರಕರಣ ದಾಖಲಾಗಿದೆ. ಗಾಂಜಾ ಮಾರಾಟ, ಸೇವನೆ, ಬೆಳೆಯುವುದರ ಬಗ್ಗೆ ನಾಗರೀಕರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೆ ತುಂಬಾ ಉಪಯುಕ್ತವಾಗಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪಿಎಸ್ಐ ಶಿವನಗೌಡ ಇದ್ದರು.