3.18 ಎಕರೆ ಜಮೀನು ಹಸ್ತಾಂತರಕ್ಕೆ
ಸಿದ್ಧತೆ
ತಕರಾರು ಅರ್ಜಿ ಸಲ್ಲಿಸಲು ಹೋರಾಟಗಾರರು,
ಸಾರ್ವಜನಿಕರು ಮುಂದೆ ಬರಲಿ
ಸರ್ಕಾರದ ಜಾಗ ಸರ್ಕಾರಕ್ಕೆ ವಾಪಾಸ್ಸಾಗಲಿ
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸುಮಾರು 6 ದಶಕಗಳ ಕಾಲ ಜ್ಞಾನಾರ್ಜನೆ ಮಾಡಿದ್ದ ತುಂಗಾ ಕಾಲೇಜಿಗೆ 2017ರಲ್ಲಿ ಸರ್ಕಾರ 24 ಎಕರೆ ಜಮೀನು ಮಂಜೂರು ಮಾಡಿದೆ. ತೀರ್ಥಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡುವ ಯುವ ಜನತೆಗೆ ಉತ್ತಮ ಶಿಕ್ಷಣ ನೀಡುವ ಸಂಬಂಧ ಸರ್ಕಾರ ಜಮೀನು ಮಂಜೂರಾತಿಗೆ ಕ್ರಮ ವಹಿಸಿತ್ತು.
ಹಾಲಿ ಆಡಳಿತ ಮಂಡಳಿಯ ಹಪಾಹಪಿಗೆ ಅನೇಕ
ಹಿರಿಯ ವ್ಯಕ್ತಿಗಳ ಪರಿಶ್ರಮದಿಂದ ಸುಂದರವಾಗಿ ರೂಪುಗೊಂಡಿರುವ ತುಂಗಾ ಕಾಲೇಜು ವರ್ಷದಿಂದ ವರ್ಷಕ್ಕೆ
ವಿದ್ಯಾಭ್ಯಾಸದಲ್ಲಿ ಹಿನ್ನಡೆ ಸಾಧಿಸುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ತೀರಾ ಇಳಿಮುಖವಾಗುತ್ತಿದ್ದು
ಹಾಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಶಾಲೆಯ ಬಗ್ಗೆ ಗೌರವ ಕಡಿಮೆಯಾಗುವ ಹಂತಕ್ಕೆ ತಲುಪಿದೆ. ಇಷ್ಟೆಲ್ಲ
ಇದ್ದರೂ ಕೂಡ ಕಾಲೇಜಿನ ಅಭಿವೃದ್ಧಿ ಮತ್ತು ಶೈಕ್ಷಣಿಕವಾಗಿ ಗುರುತಿಸಿಕೊಳ್ಳಬೇಕಿದ್ದ ಸಂಸ್ಥೆ ಅತ್ಯಂತ
ಕೆಟ್ಟ ಉದ್ದೇಶಗಳಿಂದ ಗುರುತಿಸಿಕೊಳ್ಳುತ್ತಿದೆ.
ಸಾರ್ವಜನಿಕವಾಗಿ ಅನೇಕ ಊಹಾಪೋಹಗಳು
ಕೇಳಿ ಬಂದಿದ್ದರೂ ಸಂಸ್ಥೆ ಮಾತ್ರ ಯಾವುದೇ ಹಿತಾಸಕ್ತಿಗಳಿಗೆ ಮನ್ನಣೆ ಕೊಡದೆ ಶೈಕ್ಷಣಿಕ ಜ್ಞಾನ ಹೆಚ್ಚಿಸಿಕೊಳ್ಳಲು
ಪ್ರಯತ್ನಿಸುತ್ತಿದೆ ಎಂಬ ಆಶ್ವಾಸನೆ ಕ್ಷೀಣಿಸಿದೆ. ಸದ್ಯ ಆಡಳಿತ ಮಂಡಳಿಯ ಸದಸ್ಯರ ಬೇಜವಾಬ್ದಾರಿಯಿಂದ
ಅನೇಕ ಮಹನೀಯರ ಪರಿಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ. ಕಾಲೇಜಿನ ಅಭಿವೃದ್ಧಿಗಾಗಿ ಸರ್ಕಾರ ಮಂಜೂರು ಮಾಡಿದ್ದ
24 ಎಕರೆ ಭೂಮಿಯಲ್ಲಿ 3.18 ಎಕರೆ ಜಾಗವನ್ನು ಮತ್ತೊಂದು ಟ್ರಸ್ಟ್ಗೆ ಹಸ್ತಾಂತರ ಮಾಡುವುದಕ್ಕೆ ಕಾನೂನು
ಪ್ರಕ್ರಿಯೆ ಆರಂಭಗೊಂಡಿದೆ. ತೀರ್ಥಹಳ್ಳಿ ತಾಲ್ಲೂಕಿನ ಪ್ರತಿಷ್ಠಿತ ಉದ್ಯೋಗಿಗಳು ಗುಂಪಿನೊಂದಿಗೆ ಕೈಜೋಡಿಸಿರುವ
ಕಾಲೇಜಿನ ಆಡಳಿತ ಮಂಡಳಿ ಬೇಕಾದ ಕಾನೂನು ನೆರವನ್ನು ನೀಡುತ್ತಿದೆ ಎಂಬ ಮಾಹಿತಿ ಸಾರ್ವಜನಿಕವಾಗಿ ಕೇಳಿ
ಬರುತ್ತಿದೆ.
ಪ್ರಮುಖವಾಗಿ ಕಾಲೇಜಿನ ಅಭಿವೃದ್ಧಿ
ಮತ್ತು ಶಿಕ್ಷಣ ಉದ್ದೇಶಕ್ಕಾಗಿಯೇ ನೀಡಿರುವ ಜಮೀನು ಮತ್ತೊಂದು ಸಂಸ್ಥೆಗೆ ಹಸ್ತಾಂತರ ಮಾಡುವುದು ಕಾನೂನು
ಪ್ರಕಾರ ಅಪರಾಧ. ಹಾಗೊಂದು ವೇಳೆ ಸಂಸ್ಥೆಯಲ್ಲಿ ಭೂಮಿಯ ವ್ಯವಹಾರ ನಡೆದರೆ ನ್ಯಾಯಾಲದ ಮೆಟ್ಟಿಲು ಏರುವ
ಅವಕಾಶ ಸಾರ್ವಜನಿಕರಿಗೆ ಇದೆ. ಕೇವಲ ಶಿಕ್ಷಣ ಸಂಸ್ಥೆಯ ಸ್ವಯಂ ಆಸ್ತಿ ಆಗಿರುವುದಿಲ್ಲ. ಇದೊಂದು ಸಾರ್ವಜನಿಕರ
ಸ್ವತ್ತಾಗಿದ್ದು ತಕರಾರು ಅರ್ಜಿ ಸಲ್ಲಿಸುವುದಕ್ಕೆ ಮುಕ್ತ ಅವಕಾಶ ಪ್ರಾಪ್ತವಾಗಿದೆ. ಶೈಕ್ಷಣಿಕ ಉದ್ದೇಶದಿಂದಲೇ
ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಹಸ್ತಾಂತರ ಮಾಡುವುದನ್ನು ಸಾರ್ವಜನಿಕರು, ಹಳೆಯ ವಿದ್ಯಾರ್ಥಿಗಳು,
ಕಾಲೇಜಿನಲ್ಲಿ ಉಪನ್ಯಾಸ ಮಾಡಿದ ಉಪನ್ಯಾಸಕರು ಖಂಡಿಸುತ್ತಿದ್ದಾರೆ ಎನ್ನಲಾಗಿದೆ.
ಮತ್ತೊಂದು ಖಾಸಗಿ ಸಂಸ್ಥೆಗೆ ಜಮೀನು
ಗುತ್ತಿಗೆಗೆ ಕೊಡುವ ಬದಲು ಪುನಃ ಸರ್ಕಾರಕ್ಕೆ ಹಸ್ತಾಂತರ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ. 3 ಎಕರೆ
18 ಗುಂಟೆ ಜಮೀನಿನಲ್ಲಿ ನಿವೇಶನ ರಹಿತರಿಗೆ, ಬಡವರಿಗೆ ಭೂಮಿ ಹಂಚುವುದರಿಂದ ಅನೇಕ ಕುಟುಂಬಗಳು ಸರ್ಕಾರದ
ಒಳ್ಳೆಯ ಕೆಲಸವನ್ನು ಶ್ಲಾಘಿಸುವುದಲ್ಲದೆ ನಿವೇಶನ ಬೇಡಿಕೆ ಸಮಸ್ಯೆ ಇತ್ಯರ್ಥವಾಗಲಿದೆ. ಅಲ್ಲದೇ ಸರ್ಕಾರ
ಉಚಿತ ಶಿಕ್ಷಣವನ್ನು ನೀಡುವ ದೃಷ್ಟಿಯಿಂದ ಎಲ್ಲಾ ಕಡೆ ಸರ್ಕಾರಿ ಶಾಲೆ, ಕಾಲೇಜುಗಳಿಗೆ ಪ್ರೋತ್ಸಾಹ
ನೀಡುತ್ತಿದೆ. ಅಂತೆಯೇ ಸಂಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಸರ್ಕಾರವೇ ಹಿಂಪಡೆಯಬೇಕು. ಸರ್ಕಾರಿ ಕಾಲೇಜಾಗಿ
ಪರಿವರ್ತಿಸುವುದರಿಂದ ಈಗಿರುವ ಪ್ರಥಮ ದರ್ಜೆ ಕಾಲೇಜಿನ ಭೂಮಿ ಕೊರತೆಯನ್ನು ನಿವಾರಣೆ ಮಾಡಬಹುದು ಎನ್ನುತ್ತಾರೆ
ಹಳೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು.