ಹುಣಸವಳ್ಳಿ ಗ್ರಾಮಸ್ತರಿಂದ ಸನ್ಮಾನ
17 ವರ್ಷದೊಳಗಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಆರ್ಯನ್ ಹೆಚ್.ಎ. ಹಾಗೂ ಸಮಿತ್ ಪ್ರಥಮ
ಸ್ಥಾನ ಪಡೆಯುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸೋಮವಾರ ಇಬ್ಬರು ಯುವ ಕ್ರೀಡಾಪಟುಗಳನ್ನು ಹುಣಸವಳ್ಳಿ ಗ್ರಾಮಸ್ಥರು ಗೌರವಿಸಿ ಸನ್ಮಾನಿಸಿದರು.
ಆಗುಂಬೆ ಅನ್ನಪೂರ್ಣ ವಿದ್ಯಾಮಂದಿರದಲ್ಲಿ (ಎವಿಎಂ) ಆರ್ಯನ್ ಎಸ್ಎಸ್ಎಲ್ಸಿ ಹಾಗೂ
ಸಮಿತ್ 9ನೇ ತರಗತಿಯಲ್ಲಿ ಓದುತ್ತಿದ್ದಾರೆ. ವಲಯ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರಥಮ
ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು. ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಆಟಗಾರರಾಗಿ
ಗುರುತಿಸಿಕೊಂಡಿದ್ದ ಯುವಕರನ್ನು ಶಿವಮೊಗ್ಗ ತಂಡದಿಂದ ವಿಭಾಗ ಮಟ್ಟಕ್ಕೆ ಆಯ್ಕೆ ಮಾಡಿದ್ದರು.
ಕನಕಪುರದಲ್ಲಿ ನಡೆದ ವಿಭಾಗ ಮಟ್ಟದಲ್ಲಿಯೂ ಉತ್ತಮ ಆಟದ ಮೂಲಕ ಗಮನ ಸೆಳೆದಿದ್ದರು.
ಶನಿವಾರ ಮೈಸೂರಿನ ಬೃಂದಾವನ ಪ್ರೌಢಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ ವಾಲಿಬಾಲ್
ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಮ್ಮು
ಕಾಶ್ಮೀರದಲ್ಲಿ ಅಕ್ಟೋಬರ್ 30 ರಂದು ನಡೆಯುವ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ
ತೀರ್ಥಹಳ್ಳಿಯ ಇಬ್ಬರು ಯುವಕರು ಭಾಗವಹಿಸಲಿದ್ದಾರೆ.
ಸನ್ಮಾನದ ಸಂದರ್ಭದಲ್ಲಿ ಮುನ್ನೂರು ಸುಧಾಕರ್, ಪ್ರಶಾಂತ್, ದಿನೇಶ್, ದೇವದಾಸ್,
ಹಿರಿಯಣ್ಣ, ಜಗದೀಶ್, ರಾಘವೇಂದ್ರ, ಮಾಲ್ತೇಶ್, ಸುಬ್ರಹ್ಮಣ್ಯ, ನವೀನ್ ಮುಂತಾದವರು ಇದ್ದರು.ಕುಶಾವತಿಯಿಂದ ಮೆರವಣಿಗೆಯ ಮೂಲಕ ತೀರ್ಥಹಳ್ಳಿ ಕ್ರೀಡಾಭಿಮಾನಿಗಳು ಸ್ವಾಗತಿಸಿದರು.