ಮೂರನೇ ಮಹಾಯುದ್ದ ನಿಲ್ಲಿಸಿದ್ದೇ ನರೇಂದ್ರ ಮೋದಿ

ಮೋದಿ ಗುಟುರ್‌ಗೆ ಚೀನಾ, ಪಾಕಿಸ್ತಾನ ಖತಂ

ವಿಕಾಸ್‌ ತೀರ್ಥ ಬೈಕ್‌ ರ್ಯಾಲಿಯಲ್ಲಿ ಆದರ್ಶ ಗೋಖಲೆ

ಹೆಲ್ಮೆಟ್‌ ಧರಿಸಿದ ಆರಗ ಜ್ಞಾನೇಂದ್ರ
ಕಾರ್ಯಕರ್ತರ ಹೆಲ್ಮೆಟ್‌ ವಿಚಾರಿಸಲು ಪೊಲೀಸರು ಹಿಂದೇಟು
 
ರಥಬೀದಿಯಲ್ಲಿ ಹೆಲ್ಮೆಟ್‌ ಧರಿಸದೆ ಗೃಹಸಚಿವರೊಂದಿಗೆ ರ್ಯಾಲಿಯಲ್ಲಿ ಪಾಲ್ಗೊಂಡ ಕಾರ್ಯಕರ್ತರು.

ಗೃಹಸಚಿವ ಆರಗ ಜ್ಞಾನೇಂದ್ರ ಹೆಲ್ಮೆಟ್‌ ಧರಿಸಿ ರಸ್ತೆ ಸುರಕ್ಷತಾ ಕ್ರಮ ಪಾಲನೆ

ಕೇಂದ್ರದ ನರೇಂದ್ರ ಮೋದಿ ಸರ್ಕಾರದ 8 ಪೂರೈಸಿರುವ ಹಿನ್ನಲೆಯಲ್ಲಿ ತೀರ್ಥಹಳ್ಳಿ ಮಂಡಲ ಬಿಜೆಪಿ ಯುವಮೋರ್ಚಾ ವತಿಯಿಂದ ಮಂಗಳವಾರ ತೀರ್ಥಹಳ್ಳಿ ಪ್ರಮುಖ ಬೀದಿಯಲ್ಲಿ ವಿಕಾಸ್‌ ತೀರ್ಥ ಬೈಕ್‌ ರ್ಯಾಲಿ ನಡೆಯಿತು. ಕುಪ್ಪಳ್ಳಿ, ಮಂಡಗದ್ದೆ, ಮೇಗರವಳ್ಳಿ, ಕೋಣಂದೂರು ಭಾಗದ ಶಕ್ತಿಕೇಂದ್ರಗಳಿಂದ ನೂರಾರು ಬೈಕುಗಳು ರ್ಯಾಲಿಯಲ್ಲಿ ಪಾಲ್ಗೊಂಡಿತ್ತು. ಗೃಹಸಚಿವ ಆರಗ ಜ್ಞಾನೇಂದ್ರ ರಸ್ತೆ ಸುರಕ್ಷತಾ ಕ್ರಮ ಪಾಲನೆ ಮಾಡುವ ನಿಟ್ಟಿನಲ್ಲಿ ಹೆಲ್ಮೆಟ್‌ ಧರಿಸಿದ್ದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ಸಾಗರೋಪಾದಿಯಲ್ಲಿ ಬೈಕ್‌ ಏರಿದ್ದ ಕಾರ್ಯಕರ್ತರು ಹೆಲ್ಮೆಟ್‌ ಧರಿಸದೇ ಪ್ರಯಾಣಿಸದ ಸನ್ನಿವೇಶ ಪೊಲೀಸ್‌ ಇಲಾಖೆಗೆ ಮುಜುಗರವನ್ನು ತರಿಸುವಂತಿತ್ತು.

ರ್ಯಾಲಿಯ ನಂತರ ಸೊಪ್ಪುಗುಡ್ಡೆಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅಂಕಣಕಾರ, ವಾಗ್ಮಿ ಆದರ್ಶ ಗೋಖಲೆ ಮಾತನಾಡಿ, ಒಂದೇ ಒಂದು ಗುಂಡು ಹಾರಿಸಿಲ್ಲ, ಹೊರಗೆ ಅಟ್ಟಲು ಹೋಗಿಲ್ಲ. ಆಕ್ರಮಕಾರಿ ನಿಲುವು ಇಲ್ಲದ ತಾಳ್ಮೆಯ ಮೂರ್ತಿ ಮೋದಿ ನೀಡಿದ ಚಿಕಿತ್ಸೆಗೆ ಹೆದರಿ ಚೀನಾ ದೊಕ್ಲಾಂ ಗಡಿಯಿಂದ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಓಡಿ ಹೋಗಿದೆ. ಸ್ವಾತಂತ್ರ್ಯ ನಂತರದ 68 ವರ್ಷಗಳ ಕಾಲ ಚೀನಾ, ಪಾಕಿಸ್ತಾನ ವಿರುದ್ಧ ಗುಟುರ್‌ ಹಾಕುವ ಪ್ರಧಾನಿ ಭಾರತಕ್ಕೆ ಸಿಗಲಿಲ್ಲ ಎಂದು ಹೇಳಿದರು.

ಜಗತ್ತು ಮೂರನೇ ಮಹಾಯುದ್ದವನ್ನು ದಿಟ್ಟಿಸಿ ನೋಡುವಂತಹ ಪರಿಸ್ಥಿತಿ ಎದುರಾಗಿತ್ತು. ರಷ್ಯಾ, ಉಕ್ರೇನ್‌ ಸಮರ ಯಾವ ಹಂತ ತಲುಪುತ್ತಿತ್ತು ಎಂಬುದು ಊಹಿಸಲು ಸಾಧ್ಯವಿಲ್ಲ. ವಿಶ್ವಸಂಸ್ಥೆ ಕೈಚೆಲ್ಲಿ ಕುಳಿತ್ತಿತ್ತು. ಆಗ ನರೇಂದ್ರ ಮೋದಿ ಮಧ್ಯೆ ಪ್ರವೇಶಿಸಿ ಯುದ್ದಕ್ಕೆ ಅಂತ್ಯ ಹಾಡಿದರು. ಇದು ವಿಶ್ವಗುರುವಿನ ಲಕ್ಷಣ. ತಾಳ್ಮೆಯ ಪ್ರತಿಬಿಂಬ ನರೇಂದ್ರ ಮೋದಿ ಎಂದು ಹರ್ಷ ವ್ಯಕ್ತಪಡಿಸಿದರು.

ನೋಟು ಅಮಾನೀಕರಣದ ಸಂದರ್ಭ ದೇಶದಲ್ಲಿ ಬೊಗಳೆ ಬಿಡುವವರ ಸಂಖ್ಯೆ ಹೆಚ್ಚಿತ್ತು. ಇಂಗ್ಲೀಷ್‌ ಬಾರದವರು ಬ್ಯಾಂಕ್‌ ವ್ಯವಹಾರ ಹೇಗೆ ಮಾಡುವುದು ಎಂಬ ಗೊಂದಲ ಇತ್ತು. ಇದೀಗ ಮೊಬೈಲ್‌ ಮೂಲಕ ನೇರವಾಗಿ ಹಣ ವರ್ಗಾವಣೆ ಮಾಡಬಹುದು. ಶೇಂಗಾ ಮಾರುವ ಕಮಲಮ್ಮ ಕೂಡ ಗೂಗಲ್‌ ಪೇ ಬಳಕೆ ಮಾಡುತ್ತಾಳೆ. ರೈಲು ಉನ್ನತೀಕರಣ, ಆರೋಗ್ಯ ಸೇವೆ, ಮುದ್ರಾ, ಉಜ್ವಲ ಯೋಜನೆಗಳಿಂದ ಲಕ್ಷಾಂತರ ತಾಯಂದಿರ ಕಣ್ಣೀರು ಒರೆಸಲಾಗಿದ್ದು ಸ್ವದೇಶಿ ಜಾಗ್ರತೆ ಹೆಚ್ಚುತ್ತಿದೆ ಎಂದರು.

ಯುವಮೋರ್ಚಾ ಜಿಲ್ಲಾಧ್ಯಕ್ಷ ಎಂ.ಬಿ. ಹರಿಕೃಷ್ಣ ಮಾತನಾಡಿ, ಸ್ವದೇಶಿ ಜಾಗ್ರತೆಯಿಂದ ಸಮರ್ಪಣೆ, ಸಮರ್ಥನೆ ಎರಡು ಬಹಳ ಮುಖ್ಯ. ವಿರೋಧ ಪಕ್ಷದವರು ಕವಿಗಳನ್ನು ಮುಂದಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸುತ್ತಿವೆ. ಬಿಜೆಪಿ ಕವಿ ಹೃದಯದ ರಾಜಕಾರಣಿಯನ್ನು ನೀಡಿದೆ. ದೇಶದಲ್ಲಿ ಕಳ್ಳ, ಮಳ್ಳ, ಸುಳ್ಳರು ಮಿನುಗುತ್ತಿದ್ದಾರೆ. ವೈಚಾರಿಕತೆ ಹೆಚ್ಚಿದಂತೆ ಶುಕ್ರವಾರ ಕಲ್ಲು ಹೊಡೆಯುವವರ ಸಂಖ್ಯೆ ಜಾಸ್ತಿಯಾಗಿದೆ.

ಯುವಮೋರ್ಚಾ ಜಿಲ್ಲಾಧ್ಯಕ್ಷ ಎಂ.ಬಿ. ಹರಿಕೃಷ್ಣ ಪ್ರಾಸ್ತಾವಿಸಿದರು. ವೇದಿಕೆಯಲ್ಲಿ ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ಲೇಖಕ ಆದರ್ಶ ಗೋಖಲೆ, ಯುವ ಮುಖಂಡ ಕುಕ್ಕೆ ಪ್ರಶಾಂತ್ ಮಾತನಾಡಿದರು. ಯುವ ಮೋರ್ಚಾ ಉಪಾಧ್ಯಕ್ಷ ನಿಖಿಲ್ ಕಾಮತ್ ಪ್ರಾರ್ಥಿಸಿದರು. ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಭಟ್ ಸ್ವಾಗತಿಸಿದರು. ರಕ್ಷಿತ್ ಮೇಗರವಳ್ಳಿ ನಿರೂಪಿಸಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post