ತೀರ್ಥಹಳ್ಳಿಗೆ ಬಂದು ಗುಡುಗಿದ ಪುಷ್ಪ ಅಮರನಾಥ್
“ಸಚಿವರಾದರೂ ಬೌದ್ದಿಕ ಮಟ್ಟ ಬೆಳೆದಿಲ್ಲ”
ರಾಮರಾಜ್ಯದ ಪರಿಕಲ್ಪನೆಯನ್ನು ಸಾರಿದ ಮಹಾತ್ಮ ಗಾಂಧಿಜೀ ನಾಡಿನಲ್ಲಿ ಮಹಿಳೆಯರು
ರಾತ್ರಿ ಓಡಾಡುವಂತಿಲ್ಲ. ಪುರುಷ ಪ್ರಧಾನ ಸಮಾಜ ಕಲ್ಪನೆಗಳು ಪ್ರಜ್ವಲಿಸುತ್ತಿದೆ. ದಲಿತ ಮಹಿಳೆ ರಾತ್ರಿ
ಊಟಕ್ಕೆ ಹೋಗಿದ್ದು ತಪ್ಪಾ…? ಗೃಹಸಚಿವರ ಕ್ಷೇತ್ರದಲ್ಲೇ ಮಹಿಳೆಯರಿಗೆ ಭದ್ರತೆ ಇಲ್ಲವಾಗಿದೆ ಎಂದು
ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಗಂಭೀರ ಆರೋಪಿಸಿದರು.
ಸ್ವ ಕ್ಷೇತ್ರದಲ್ಲೇ ಗೃಹಸಚಿವರು ಅಸಹಾಯಕ ಮಹಿಳೆಯರನ್ನು ರಕ್ಷಿಸಲು ವಿಫಲರಾಗಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಆರಗ ಸಮೀಪ ನಡೆದ ಅತ್ಯಾಚಾರ ಯತ್ನ ಪ್ರಕರಣವನ್ನು
ಸರ್ಕಾರ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ. ಮಹಿಳೆಯರಿಗೆ ಅಭದ್ರತೆ ಉಂಟಾಗಿದ್ದು ಇದಕ್ಕೆ ನೈತಿಕ
ಹೊಣೆ ಹೊತ್ತು ಗೃಹಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಇಲ್ಲವೇ ರಾಜ್ಯಪಾಲರು ಅವರನ್ನು ವಜಾಗೊಳಿಸಬೇಕು
ಎಂದು ಆಗ್ರಹಿಸಿದರು.
ಪೊಲೀಸ್ ಇಲಾಖೆಗೆ ಮುಕ್ತವಾಗಿ ಕೆಲಸ ಮಾಡುವ ಸ್ವಾತಂತ್ರ್ಯ ಇಲ್ಲ. ಆಸಿಡ್
ದಾಳಿ ನಡೆಸಿದ ಆರೋಪಿ ಬಂಧಿಸಲು ಗೃಹ ಇಲಾಖೆಗೆ 15 ದಿನ ಬೇಕಾಯಿತು. ಸಾಕ್ಷಿಗಳನ್ನು ನಾಶಗೊಳಿಸಿದ ನಂತರ
ಬಂಧಿಸಲಾಗುತ್ತಿದೆ. ತನಿಖೆ ಚುರುಕುಗೊಳಿಸಿ ವಾರದೊಳಗೆ ಪರಿಶಿಷ್ಟ ದಂಪತಿಗೆ ದೌರ್ಜನ್ಯ ಎಸಗಿರುವ ಪ್ರಕರಣದ
ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರಭಾವತಿ ಶಾಮಣ್ಣ, ಸುಜಾತ, ತಾಲ್ಲೂಕು ಅಧ್ಯಕ್ಷೆ ಜಯಾ ಜಿ. ರಾವ್, ಪ್ರಮುಖರಾದ ವಿಜಯಲಕ್ಷ್ಮೀ, ಸ್ಪೆನೋಮಾರ್ಟೀಸ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್ ಇದ್ದರು.

