ತೀರ್ಥಹಳ್ಳಿಯಲ್ಲಿ ಪ್ರವಾಸೋದ್ಯಮಕ್ಕೆ ಉಜ್ವಲ ಅವಕಾಶ – ಆರ್.ಎಂ.ಮಂಜುನಾಥ ಗೌಡ
ಅಭಿವೃದ್ಧಿ ವಿಚಾರದಲ್ಲಿ ಎಲ್ಲಾ ಪಕ್ಷದವರು ಒಂದಾಗಬೇಕು. ಇದರಲ್ಲಿ ರಾಜಕೀಯ ಸಲ್ಲದು ಎಂಬುದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿಲುವು. ತೀರ್ಥಹಳ್ಳಿಯಲ್ಲಿಯೂ ಕೂಡ ಈ ಪರಂಪರೆ ಆರಂಭವಾಗಬೇಕು. ಅಭಿವೃದ್ಧಿ ವಿಚಾರದಲ್ಲಿ ಶಾಸಕರ ಜೊತೆ ಸಮನ್ವಯ ಇರಲೇಬೇಕಾಗುತ್ತದೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದ್ದಾರೆ.
ಇಂದು ತೀರ್ಥಹಳ್ಳಿಯ ಆಗುಂಬೆ ವೃತ್ತದಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಿಂದ ನಿರ್ಮಿಸಲಾದ ನೂತನ ಬಸ್ ನಿಲ್ದಾಣ ಉದ್ಘಾಟಿಸಿ ಮಾತನಾಡಿದ ಅವರು, ತೀರ್ಥಹಳ್ಳಿಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲವಾದ ಅವಕಾಶ ಇದೆ. ಇದು ಯುವಜನತೆಗೆ ಹೊಸ ಉದ್ಯೋಗ ಸೃಷ್ಠಿಗೂ ಅವಕಾಶ ನೀಡುತ್ತದೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು ಮುಂದೆ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು ಎಂದವರು ಹೇಳಿದ್ದಾರೆ.
ಆಕರ್ಷಕ ಬಸ್ ನಿಲ್ದಾಣಗಳು ಪಟ್ಟಣದ ಸೌಂದರ್ಯ ಮತ್ತು ನಾಗರೀಕರ ಸದಾಭಿರುಚಿಯನ್ನು ಬಿಂಬಿಸುತ್ತದೆ. ಇಂಗ್ಲೆಂಡಿನಲ್ಲಿ ಬಸ್ ನಿಲ್ದಾಣಗಳು ಅತ್ಯಂತ ಆಕರ್ಷಕವಾಗಿದ್ದು ಶೌಚಾಲಯ, ವಿಶ್ರಾಂತಿ ಕೊಠಡಿಯನ್ನು ಹೊಂದಿರುತ್ತವೆ. ಆ ಮಾದರಿಯನ್ನು ಇಲ್ಲಿ ಉಪಯೋಗಿಸಿಕೊಂಡು ನಿರ್ಮಿಸಲಾಗುತ್ತಿದೆ. ಸ್ವಚ್ಚತೆಯನ್ನು ಕಾಪಾಡುವುದು ಎಲ್ಲರ ಹೊಣೆಗಾರಿಕೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಚೀಂದ್ರ ಹೆಗ್ಡೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯರಾದ ಶಬನಮ್, ಸುಶೀಲ ಶೆಟ್ಟಿ, ಮಂಜುಳಾ ನಾಗೇಂದ್ರ, ಜೀನಾ ವಿಕ್ಟರ್, ಟಿ.ಎಲ್.ಸುಂದರೇಶ್, ಬಿ.ಆರ್.ರಾಘವೇಂದ್ರ ಶೆಟ್ಟಿ, ಡಾ.ಅನಿಲ್, ಕುರುವಳ್ಳಿ ನಾಗರಾಜ್, ಹಸಿರುಮನೆ ಮಹಾಬಲೇಶ್, ತಹಶೀಲ್ದಾರ್ ರಂಜಿತ್ ಮುಂತಾದವರು ಇದ್ದರು.
