ಕೋವಿಡ್ ಸಂದರ್ಭದ ಸೇವೆ ಜನಜನಿತ
ಪರಿಶ್ರಮದಿಂದಲೇ ಉದ್ಯಮದಲ್ಲಿ ವಿಶೇಷ ಸಾಧನೆ
ತೀರ್ಥಹಳ್ಳಿಯ ಸಿರಿಬೈಲ್ ಹಾರ್ಡ್ವೇರ್ ಮಾಲೀಕರಾದ ಸರಳ ಪ್ರವೀಣ್ (40) ಸೋಮವಾರ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. ಅವರು ತಾಯಿ, ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಇತ್ತೀಚೆಗೆ ಅವರು ಆರೋಗ್ಯದ ಸಮಸ್ಯೆ ಹಿನ್ನಲೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಆರೋಗ್ಯದಲ್ಲಿ ಸುಧಾರಣೆ ಹೊಂದುತ್ತಿದ್ದರು. ಸೋಮವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರು ಕಂಡಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗಿತ್ತು. ಅಷ್ಟರಲ್ಲೇ ಮಾರ್ಗಮಧ್ಯೆ ಅಸುನೀಗಿದ್ದಾರೆ.
ಪರಿಶ್ರಮದ ಮೂಲಕ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಉದ್ಯಮಿಯಾಗಿ ಬೆಳೆದಿದ್ದ ಅವರು ತಮ್ಮ ಸರಳತೆಯ ವ್ಯಕ್ತಿತ್ವದ ಮೂಲಕ ಎಲ್ಲರ ವಿಶ್ವಾಸಗಳಿಸಿದ್ದರು. ತೀರ್ಥಹಳ್ಳಿಯಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿಯೂ ಭಾಗವಹಿಸುವ ಜೊತೆಗೆ ಆರ್ಥಿಕ ನೆರವು ನೀಡುತ್ತಿದ್ದರು. ಎಳ್ಳಮಾವಾಸ್ಯೆ, ದಸರಾ ಸೇರಿದಂತೆ ತಾಲ್ಲೂಕಿನ ಹಬ್ಬಗಳ ಸಂದರ್ಭ ಮೂಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತಿದ್ದರು.
ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ದೇಶವೇ ಸಂಕಷ್ಟದಲ್ಲಿತ್ತು. ತೀರ್ಥಹಳ್ಳಿ ಕೂಡ ಇದರಿಂದ ಹೊರತಾಗಿರಲಿಲ್ಲ. ನೊಂದ ಜೀವಗಳಿಗೆ ನೆರವು ನೀಡುವ ಮೂಲಕ ತಮ್ಮ ಅಳಿಲು ಸೇವೆ ನೀಡುತ್ತಿದ್ದರು. ಉದ್ಯಮದಲ್ಲಿಯೂ ತಾವು ಎಲ್ಲರಂತೆ ರೇಸಿಗೆ ಬೀಳದೆ ಗೃಹ ನಿರ್ಮಾಣದ ಸಾಮಾಗ್ರಿಯನ್ನು ಅತ್ಯಂತ ಕಡಿಮೆ ದರದಲ್ಲಿ ನೀಡುತ್ತಿದ್ದರು. ಅವರ ಅಂದಿನ ಕಾರ್ಯಚಟುವಟಿಕೆಯನ್ನು ಇಂದಿಗೂ ಅನೇಕರು ನೆನಪಿಸುತ್ತಾರೆ.
ಅವರ ಸಾವು ನಿಜಕ್ಕೂ ದುಃಖಕರ ಸಂಗತಿ. ಪ್ರವೀಣ್ ಅವರಿಗೆ ನೆಲದ ಧ್ವನಿ ಬಳಗದ ನಮನಗಳು.