ಅದ್ದೂರಿಯಾಗಿ ಆಚರಣೆ ಮಾಡಲು ಸಿದ್ಧತೆ
1949ರಲ್ಲಿ ಸ್ವತಂತ್ರ ಸೇನಾನಿ ದೇವಂಗಿ ಮಾನಪ್ಪರಿಂದ ಸ್ಥಾಪನೆಗೊಂಡ ತೀರ್ಥಹಳ್ಳಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು (ಟಿಎಪಿಸಿಎಂಎಸ್) ಅಮೃತ ಮಹೋತ್ಸವ ಆಚರಣೆ ಮಾಡುತ್ತಿದೆ ಸಂಸ್ಥೆ ಕೇವಲ ಲಾಭದ ಹಿಂದೆ ಹೋಗದೆ ರೈತರ ಹಿತ ಕಾಯುತ್ತಿದೆ ಎಂದು ಸಂಘದ ಅಧ್ಯಕ್ಷ ನಾಗರಾಜ ಶೆಟ್ಟಿ ತಿಳಿಸಿದರು.
ವಾರ್ಷಿಕ 150.76 ಕೋಟಿ ವಹಿವಾಟು ನಡೆಸಿ 30.42 ಲಕ್ಷ ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ ಅಮೃತ ಮಹೋತ್ಸವದ ಪ್ರಯುಕ್ತ ಶೇಕಡಾ 10 ರಷ್ಟು ವಿಶೇಷ ಡಿವಿಡೆಂಡ್ ಸೇರಿ ಒಟ್ಟು ಶೇಕಡಾ 25 ರಷ್ಟು ಡಿವಿಡೆಂಟ್ ಹಂಚಲು ನಿರ್ಧರಿಸಲಾಗಿದೆ.
ಸಂಘ ನಡೆದು ಬಂದ ಹಾದಿ ಕುರಿತು ಕಿರು ಹೊತ್ತಿಗೆ ಬಿಡುಗಡೆ ಮಾಡಲಾಗುತ್ತಿದೆ
ಎಂದು ಹೇಳಿದರು.
ಆಡಳಿತ ಮಂಡಳಿ ಚುನಾವಣೆ ಹಿರಿಯ ಸಹಕಾರಿಗಳ ಸಹಕಾರದಿಂದ ಎಲ್ಲಾ ಸ್ಥಾನಗಳಿಗೂ ಸದಸ್ಯರನ್ನು ಅವಿರೋಧವಾಗಿ ಆಯ್ಕೆಯಾಗಿದೆ. ಇದರಿಂದ ಹೆಚ್ಚುವರಿ ವೆಚ್ಚ ಇಲ್ಲದೆ ಸಂಸ್ಥೆಗೆ ಲಾಭವಾಗಿದೆ. ಆಡಿಟ್ ವರ್ಗೀಕರಣದಲ್ಲಿ ಸತತವಾಗಿ ಎ ವರ್ಗೀಕರಣ ಲಭಿಸಿದೆ. 75 ವರ್ಷದ ಸಂಭ್ರಮಾಚರಣೆ ನೆನಪಿಗಾಗಿ ಕಟ್ಟಡ ನವೀಕರಣ, ಹೊಸ ಸಭಾಂಗಣ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ ಮಳಿಗೆ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ನುಡಿದರು.
ವ್ಯಾಪಾರ ವಿಭಾಗದಲ್ಲಿ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ವ್ಯವಸಾಯ ಉಪಕರಣ, ಆರ್ಸಿಸಿ ಪೈಪ್, ಕಾಂಕ್ರಿಟ್ ಸಾಮಗ್ರಿ, ಮದ್ದುಗುಂಡು ಮಾರಾಟದಿಂದ 33 ಲಕ್ಷ, ಅಕ್ಕಿಗಿರಣಿ ವಿಭಾಗದಲ್ಲಿ 1.4 ಲಕ್ಷ, ಅಡಿಕೆ ಕಮಿಷನ್ ವ್ಯವಹಾರದಲ್ಲಿ 9 ಲಕ್ಷ, ಕಟ್ಟಡ ಬಾಡಿಗೆಯಿಂದ 33 ಲಕ್ಷ ಆದಾಯ ಪಡೆದಿದೆ ಎಂದರು.
ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಬಸವಾನಿ ವಿಜಯದೇವ್ ಮಾತನಾಡಿ ಟಿಎಪಿಸಿಎಂಎಸ್ ಸಂಸ್ಥೆ ಕಾರಣ ಮಾರುಕಟ್ಟೆಯಲ್ಲಿ ರೈತರ ಉಪಯೋಗಿಸಿ ವಸ್ತುಗಳು ನಿಯಂತ್ರಣದಲ್ಲಿವೆ ಮತ್ತು ಇಲ್ಲಿ ಉತ್ತಮ ಗುಣ ಮಟ್ಟದ ವಸ್ತುಗಳನ್ನು ಮಾರಲಾಗುತ್ತದೆ ಎಂದರು.
ಉಪಾಧ್ಯಕ್ಷ ಶಿವಕುಮಾರ್ ಕೆ.ಎಸ್., ನಿರ್ದೇಶಕರಾದ ಅಂಜುರ ಕೆ.ವಿ, ಅಭಿನಂದನ್ ಎಚ್.ಜೆ., ದೇವರಾಜ ಡಿ, ರಮೇಶ್ ಕೆ.ಎಸ್., ಸತೀಶ ಎಂ.ಆರ್, ಹರೀಶ ಡಿ.ಜಿ., ರಾಘವೇಂದ್ರ ಕೆ.ಎನ್., ವಾಸುದೇವ ಎನ್.ಜಿ, ವಿಶ್ವನಾಥ ಡಿ.ಸಿ., ನಾಗರತ್ನಾ ಮುರುಘರಾಜ್, ವಿನಂತಿ ಪ್ರಭಾಕರ, ರಾಘವೇಂದ್ರ ಎಸ್., ಚಂದ್ರಶೇಖರ್ ಎಂ.ವಿ., ಕಾರ್ಯದರ್ಶಿ ರಚನಾ ಹೆಚ್.ಜಿ. ಇದ್ದರು.