ಶೀರೂರು, ಪಡುವಳ್ಳಿ
ಗ್ರಾಮದಲ್ಲಿ ಮರಗಳ ಕಟಾವು ದಂಧೆ
ಅರಣ್ಯ ಪ್ರದೇಶದಲ್ಲಿ
ನಾಟ ತಯಾರಿ – ಅಧಿಕಾರಿಗಳು ಶಾಮೀಲು..?
ತೀರ್ಥಹಳ್ಳಿ ತಾಲ್ಲೂಕಿನ
ಪಡುವಳ್ಳಿ, ಶೀರೂರು, ಬೆಟಗೇರಿ, ಜಾವಗಲ್ಲು ಗ್ರಾಮದ ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ವಿಪರೀತ
ಪ್ರಮಾಣದಲ್ಲಿ ವಿವಿಧ ಜಾತಿಯ ಕಾಡು ಮರಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳ ಜೊತೆಗೆ ಮರ್ಜಿ ಮಾಡಿಕೊಂಡು
ಕಡಿದ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಸ್ಥಳೀಯ ಪ್ರಮುಖ ನಾಯಕರು, ಮುಖಂಡರು ಇದಕ್ಕೆ ಬೆಂಬಲಿಸುತ್ತಿರುವ
ಬಗ್ಗೆ ಸಾರ್ವಜನಿಕರಿಂದ ಆರೋಪ ಕೇಳಿ ಬಂದಿದೆ.
ಕಳೆದ 4 ವರ್ಷಗಳಿಂದ ಹೊನ್ನೇತ್ತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಹಲಸಿನ ಮರ ಕಡಿದಿರುವ ದಂಧೆ ಇನ್ನಷ್ಟು ಸಕ್ರೀಯವಾಗಿದೆ. ಆಗುಂಬೆ ವಲಯಾರಣ್ಯ ವಿಭಾಗದ ಕೆಲ ಅಧಿಕಾರಿಗಳ ನೆರವಿನಿಂದ ಅರಣ್ಯದೊಳಗೆ ಸಂಪೂರ್ಣ ಪ್ರಮಾಣದಲ್ಲಿ ನಾಟ ತಯಾರಿಸಿ ವಿವಿಧ ಭಾಗಗಳಿಗೆ ಸಾಗಾಣೆ ಮಾಡುತ್ತಿದ್ದಾರೆ ಎಂಬ ಗಂಭೀರ ಸ್ವರೂಪದ ದೂರುಗಳು ಇದೀಗ ಹೆಚ್ಚುತ್ತಿದೆ. ಗೃಹಪಯೋಗಿ ವಸ್ತುಗಳ ತಯಾರಿಕೆಗಾಗಿಯೇ ಹಣಕ್ಕಾಗಿ ಮರಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಬಗ್ಗೆ ಸಾರ್ವಜನಿಕರಿಂದ ಹಿರಿಯ ಅಧಿಕಾರಿಗಳಿಗೆ ದೂರುಗಳು ಸಲ್ಲಿಕೆಯಾಗುತ್ತಿದೆ.
ಹಿಂದೆಮ್ಮೆ ಮಲೆನಾಡನ್ನು ವ್ಯಾಪಿಸಿದ್ದ ಶ್ರೀಗಂಧದ ಕಳ್ಳ ಸಾಗಾಣೆಯಾಗುತ್ತಿದ್ದ ಜಾಗದಲ್ಲಿ ಇದೀಗ ಅತೀ ಹೆಚ್ಚು ಬೆಲೆಗೆ ಮಾರಾಟವಾಗುವ ಹಲಸಿನ ಮರ ಸೇರಿಕೊಂಡಿದೆ. ಯಾವ ಭಾಗದಲ್ಲಿ ಹಲಸಿನ ಮರ ಇದೆ ಎಂಬ ಬಗ್ಗೆಯೂ ದಂಧೆಕೋರರು, ಅಧಿಕಾರಿಗಳ ಸಮ್ಮುಖದಲ್ಲಿ ರೌಂಡ್ ಟೇಬಲ್ ಚರ್ಚೆ ನಿತ್ಯ ನಡೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಮರಗಳ ಹನನವಾದ ಬಳಿಕ ಅದನ್ನು ಮಿಷನ್ ಬಳಸಿ ಅಲ್ಲಿಯೇ ನಾಟ ಮಾಡುತ್ತಿದ್ದು ಅರಣ್ಯ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.
ಪಡುವಳ್ಳಿಯ ಕಿರು ಅರಣ್ಯ ಪ್ರದೇಶದಲ್ಲಿ ಹಲಸಿನ ಮರ ಕಡಿದಿರುವ ಪ್ರಕರಣವನ್ನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದ ತಂಡ ಗಂಭೀರವಾಗಿ ಪರಿಗಣಿಸಿದ್ದು ತನಿಖೆ ಆರಂಭಿಸಿದೆ. ಶಿವಮೊಗ್ಗ ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಉಪ ಸಂರಕ್ಷಣಾಧಿಕಾರಿ ಮರಕಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದು ಸ್ಥಳಕ್ಕೆ ತೀರ್ಥಹಳ್ಳಿಯ ಉಪವಿಭಾಗದ ಅರಣ್ಯಾಧಿಕಾರಿ ಮಧುಸೂದನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.