ತೀರ್ಥಹಳ್ಳಿಯ 50ಕ್ಕೂ ಹೆಚ್ಚು ಸಮಾಜವಾದಿಗಳ ಪರಿಚಯ
ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶಿಕಾರಿಪುರ ಸುವ್ವಿ ಪಬ್ಲಿಕೇಷನ್, ಸಾಹಿತ್ಯ ಬಳಗದ ಸಹಯೋಗದಲ್ಲಿ ʼಗಾಳಿಬೆಳಕಿನ ಪಯಣಿಗರುʼ ಪುಸ್ತಕ ಬಿಡುಗಡೆ ಸಮಾರಂಭ ಇಲ್ಲಿನ ಬಂಟರ ಭವನದಲ್ಲಿ ಮೇ 25ರ ಸಂಜೆ 4.30ಕ್ಕೆ ನಡೆಯಲಿದೆ ಎಂದು ಕೃತಿ ಕತೃ ಜೆ.ಕೆ. ರಮೇಶ್ ತಿಳಿಸಿದರು.
ತಾಲ್ಲೂಕಿನ ಸುಮಾರು 50ಕ್ಕೂ ಹೆಚ್ಚು ಸಮಾಜವಾದಿಗಳ ಪರಿಚಯವನ್ನು ಪುಸ್ತಕದಲ್ಲಿ ವಿವರಿಸಲಾಗಿದೆ. ತೇಜಸ್ವಿ, ಕುವೆಂಪು, ಅನಂತಮೂರ್ತಿ ಸೇರಿದಂತೆ ಸದಾಶಿವರಾಯರು, ಶಾಂತವೇರಿ ಗೋಪಾಲಗೌಡರು, ಬಿ.ಬಿ.ಮೂರ್ತಿ, ಹುಗಳವಳ್ಳಿ ಸುರೇಂದ್ರ ಮುಂತಾದವರ ಸಮಾಜವಾದಿ ತತ್ವ, ಸಿದ್ಧಾಂತದ ಕುರಿತು ಹೊಸ ತಲೆಮಾರಿಗೆ ತಿಳಿಸುವ ಪ್ರಯತ್ನ ಮಾಡಿದ್ದೇನೆ ಎಂದು ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಕಾದಂಬರಿಕಾರ್ತಿ ಸವಿತಾ ನಾಗಭೂಷಣ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಸಾಹಿತಿ ನಟರಾಜ್ ಹುಳಿಯಾರ್ ಭಾಗವಹಿಸಲಿದ್ದಾರೆ. ಪ್ರಕಾಶಕ ಸುನೀಲ್ ಕುಮಾರ್ ಬಿ.ಎನ್. ಉಪಸ್ಥಿತಿ ವಹಿಸಲಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ವಾಸಂತಿ ಶೆಣೈ ಗೀತಾಗಾಯನ ನಡೆಸಿಕೊಡಲಿದ್ದಾರೆ ಎಂದರು.